ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾರೂ ಊಹಿಸದ ರೀತಿಯಲ್ಲಿ ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಸೋಲು ಕಾಣುತ್ತಿದೆ.
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೇದಾರ್ ಜಾಧವ್ ವಿಲನ್ ಆಗಿದ್ದಾರೆ ಎಂದು ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಗೆಲ್ಲುವ ಹಾದಿಯಲ್ಲಿದ್ದ ಚೆನ್ನೈ ತಂಡವನ್ನು ಕೇದಾರ್ ಜಾಧವ್ ಸೋಲಿಗೆ ಸಿಲುಕಿಸಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಕೊನೆಯ ಹಂತದಲ್ಲಿ ಬ್ಯಾಟ್ಸಮನ್ ಗಳು ವೈಫಲ್ಯ ಅನುಭವಿಸಿದ್ದರಿಂದಾಗಿ 10 ರನ್ ಗಳ ಸೋಲು ಕಂಡಿತು. ಈ ಸೋಲಿಗೆ ಕೇದಾರ್ ಜಾಧವ್ ಕಳಪೆ ಆಟವೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.
ಅಲ್ಲದೇ, ಈಗ ಸಾಮಾಜಿಕ ಜಾಲತಾಣದಲ್ಲಿ ಚೆನ್ನೈ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದು, ಕೇದಾರ್ ಕೈ ಬಿಟ್ಟು, ರೈನಾರನ್ನು ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಧೋನಿ ಕೂಡ ವೈಫಲ್ಯ ಅನುಭವಿಸುತ್ತಿರುವುದು ಕೂಡ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಕೋಲ್ಕತ್ತಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ, ಕೇವಲ 11 ಎಸೆತಗಳಲ್ಲಿ 12 ರನ್ ಗಳಿಸಿದ್ದರು. ಧೋನಿ ಔಟಾಗುತ್ತಿದಂತೆ ರವೀಂದ್ರ ಜಡೇಜಾ ಅಥವಾ ಡ್ವೇಯ್ನೆ ಬ್ರಾವೋ ಅವರನ್ನು ಕಳುಹಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆ ಸಂದರ್ಭದಲ್ಲಿ ಚೆನ್ನೈಗೆ ಗೆಲ್ಲಲು 21 ಎಸೆತಗಳಲ್ಲಿ 38 ರನ್ ಬೇಕಿತ್ತು.
ಆದರೆ, ಆ ಸಂದರ್ಭದಲ್ಲಿ ಮೈದಾನಕ್ಕೆ ಕೇದಾರ್ ಬಂದರು. 12 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಸೋಲಿಗೆ ಪ್ರಮುಖ ಕಾರಣರಾದರು. ಚೆನ್ನೈ ತನ್ನ ಮುಂದಿನ ಪಂದ್ಯವನ್ನು ಆರ್ ಸಿಬಿ ವಿರುದ್ಧ ದುಬೈನಲ್ಲಿ ಅಕ್ಟೋಬರ್ 10ರಂದು ಆಡಲಿದೆ. ಇಲ್ಲಿಂದ ಮುಂದೆ 6 ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಳ್ಳಬಹುದು. ಹೀಗಾಗಿ ಅಭಿಮಾನಿಗಳು ಇನ್ನಾದರೂ ಎಲ್ಲರೂ ಬ್ಯಾಟ್ ಬೀಸಿ ಹಾಗೂ ರೈನಾರನ್ನು ಮರಳಿ ಕರೆಯಿಸಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ.