ರೋಣ: ಸಾರ್ವಜನಿಕರು ಪ್ರತಿನಿತ್ಯ ಪರದಾಡುತ್ತಿರುವಾಗ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಐಷಾರಾಮಿ ವಾಹನದಲ್ಲಿ ಅಡ್ಡಾಡುತ್ತಿರುವಾಗ ನಮ್ಮಂತವರ ಕಷ್ಟ ನಿಮಗೆ ಹೇಗೆ ಗೊತ್ತಾಗುತ್ತದೆ ಎಂದು ತಾಲೂಕು ದಲಿತ ಸಂಘಟನೆಯ ಮುಖಂಡ ವೀರಪ್ಪ ತೆಗ್ಗಿನಮನಿ ಆಕ್ರೋಶ ವ್ಯಕ್ತಪಡಿಸಿದರು.
ರೋಣ ಪಟ್ಟಣದ ಸೂಡಿ ಕ್ರಾಸ್ ಬಳಿ ದಲಿತ ಸಂಘರ್ಷ ಸಮಿತಿ, ಆಟೋ ಚಾಲಕರ ಸಂಘ, ವ್ಯಾಪಾರಸ್ಥರ ಸಂಘ ಹಾಗೂ ಕನ್ನಡಪರ ಸಂಘಟನೆಗಳ ವತಿಯಿಂದ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಗರದ ಪ್ರಮುಖ ರಸ್ತೆಗಳು ಹಾಳಾಗಿ ಹೋಗಿದ್ದು, ಚರಂಡಿಗಳು ನಾರುತ್ತಿವೆ. ನೀರು ಪೂರೈಸುವ ಕೊಳವೆ ಬಾವಿಗಳು ಕೆಟ್ಟು ಹೋಗಿವೆ. ಇನ್ನು ಬೀದಿ ದೀಪಗಳು ಬೆಳಗದೆ ಕತ್ತಲು ನೀಡುತ್ತಿವೆ. ಇಂತಹ ದುಸ್ಥಿತಿಯಲ್ಲಿ ಜನಸಾಮಾನ್ಯರು ಬದುಕುವಂತಾಗಿದೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಕಾಳಜಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಧರಣಿ ಸ್ಥಳಕ್ಕೆ ತಾಲೂಕಾ ದಂಢಾಧಿಕಾರಿ, ಪುರಸಭೆಯ ಮುಖ್ಯಾಧಿಕಾರಿ, ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆಗಮಿಸಿ ಮನವಿ ಸ್ವೀಕರಿಸಿದರು.
ಹತ್ತು ದಿನಗಳ ಒಳಗೆ ಸಂಪೂರ್ಣ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಎಲ್ಲಾ ಕಾಮಗಾರಿಗಳನ್ನು ತಕ್ಷಣವೇ ಕೈಗೊಳ್ಳುತ್ತೇವೆ. ನಮ್ಮ ವ್ಯಾಪ್ತಿಗೆ ಬರುವ ರಸ್ತೆಗಳಾಗಲಿ ಬೀದಿ ದೀಪಗಳಾಗಲಿ, ಚರಂಡಿಗಳ ದುರಸ್ಥಿಗಳನ್ನು ಇನ್ನೂ ಮೂರು ದಿನಗಳೊಗಾಗಿ ಪೂರ್ಣಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪುರಸಭೆ ಮುಖ್ಯಾಧಿಕಾರಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ವೀರಪ್ಪ ತೆಗ್ಗಿನಮನಿ, ಪ್ರಕಾಶ ಹೊಸಳ್ಳಿ, ಹನಮಂತ ಛಲವಾದಿ, ಮಂಜುನಾಥ್ ಹಾಳಕೇರಿ ಸೇರಿದಂತೆ ಇತರರು ಹಾಗೂ ಹಲವಾರು ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.