ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯ ಈ ಬಾರಿಯ ಅರ್ಜುನ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಆದರೆ, ಎಲ್ಲರೂ ನಿರೀಕ್ಷೆ ಮಾಡಿದ್ದ ಸಾಕ್ಷಿ ಮಲಿಕ್ ಮತ್ತು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರ ಹೆಸರುಗಳು ಮಾತ್ರ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ನಾನು ಅರ್ಜುನ ಪ್ರಶಸ್ತಿ ಪಡೆಯಬೇಕಾದರೆ ಯಾವ ಪದಕ ಗೆಲ್ಲಬೇಕು ಎಂದು ಪ್ರಧಾನಿ ಮೋದಿ ಅವರನ್ನು ಸಾಕ್ಷಿ ಪ್ರಶ್ನಿಸಿದ್ದಾರೆ.
ಅರ್ಜುನ ಪ್ರಶಸ್ತಿಗಾಗಿ ಕ್ರೀಡಾ ಸಚಿವಾಲಯದ ಪಟ್ಟಿಯಲ್ಲಿ 29 ಹೆಸರುಗಳಿದ್ದವು. ಇದರಲ್ಲಿ ಸಾಕ್ಷಿ ಮತ್ತು ಚಾನು ಹೆಸರುಗಳನ್ನು ತೆಗೆದು ಹಾಕಿದ ಸಚಿವಾಲಯ 27 ಹೆಸರುಗಳನ್ನಷ್ಟೇ ಪ್ರಕಟಿಸಿತ್ತು. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಪದಕ ಗೆದ್ದಿದ್ದಕ್ಕಾಗಿ ಸಾಕ್ಷಿಗೆ ಖೇಲ್ ರತ್ನ ಪ್ರಶಸ್ತಿ ಲಭಿಸಿತ್ತು. 2017ರ ವಿಶ್ವ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿಗೂ ಪ್ರತಿಷ್ಠಿತ ಪ್ರಶಸ್ತಿ ದೊರೆತಿತ್ತು.
ನಿಯಮಗಳ ಪ್ರಕಾರ, ದೇಶದ ಅತ್ಯುನ್ನತ ಕ್ರೀಡಾ ಗೌರವ ಗಳಿಸಿದ ಬಳಿಕ ಅದಕ್ಕಿಂತ ಕೆಳಸ್ತರದ ಪ್ರಶಸ್ತಿಗಳಿಗೆ ಕ್ರೀಡಾಪಟುಗಳನ್ನು ಪರಿಗಣಿಸುವಂತಿಲ್ಲ. ಆದರೂ ಈ ಇಬ್ಬರು ಕ್ರೀಡಾಪಟುಗಳ ಹೆಸರು ಸೇರ್ಪಡೆಯಾದಾಗ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಹೀಗಾಗಿಯೇ ಆಯ್ಕೆ ಸಮಿತಿ ಖೇಲ್ ರತ್ನ ಪ್ರಶಸ್ತಿ ವಿಜೇತರ ಈ ಇಬ್ಬರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಪರಿಗಣಿಸಿಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟನೆ ನೀಡಿದೆ.