ಗದಗ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ ನದಿಯಿಂದಾಗಿ ಗದಗ ಜಿಲ್ಲೆಯ 16 ಹಳ್ಳಿಗಳು ಪ್ರವಾಹದ ಭೀತಿ ಎದುರಿಸುವಂತಾಗಿದೆ. ನರಗುಂದ ಹಾಗೂ ರೋಣ ತಾಲೂಕಿನ ಹಲವು ಹಳ್ಳಿಗಳ ಜನರಲ್ಲೀಗ ಪ್ರವಾಹ ಆತಂಕ ಸೃಷ್ಟಿಯಾಗಿದೆ.
ಮಲಪ್ರಭಾ ನದಿಗೆ 26,864 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ ಹಿನ್ನೆಲೆ ಗಂಟೆ ಗಂಟೆಗೂ ನೀರಿನ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ನದಿ ಪಾತ್ರದ ಜನರಿಗೆ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಹಲವು ಗ್ರಾಮಗಳನ್ನು ಜಿಲ್ಲಾಡಳಿತ ಈಗಾಗಲೇ ಸ್ಥಳಾಂತರ ಮಾಡಿಸಿದೆ.
ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮಳೆ, ಚಳಿಯಲ್ಲಿ ಮತ್ತೆ ಲಖಮಾಪೂರ ಗ್ರಾಮಸ್ಥರ ಗೋಳಾಡುವಂತಾಗಿದೆ. ಜೊತೆಗೆ ಲಖಮಾಪೂರ ನಡುಗಡ್ಡೆಯಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಗ್ರಾಮದ ಹೊರವಲಯದ ಜಮೀನು ಮತ್ತು ರಸ್ತೆ ಅಕ್ಕಪಕ್ಕದಲ್ಲಿ ಟ್ರ್ಯಾಕ್ಟರ್ ನಲ್ಲಿ ಗ್ರಾಮಸ್ಥರು ಆಶ್ರಯ ಪಡೆದಿದ್ದಾರೆ, ಇದರಿಂದ ಕೆಲ ಕುಟುಂಬಗಳು ರಸ್ತೆ ಬದಿ ಜೀವನ ನಡೆಸುವಂತಾಗಿದೆ.
ಈ ಕಾರಣದಿಂದ ಲಖಮಾಪುರ ಗ್ರಾಮಸ್ತರ ಮನವೊಲಿಸಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರೀಷ್ಠಾಧಿಕಾರಿಗಳು ಮುಂದಾದರು. ಬೆಳ್ಳೇರಿ ಪರಿಹಾರ ಕೇಂದ್ರಕ್ಕೆ ಶಿಫ್ಟ್ ಆಗುವಂತೆ ಅಧಿಕಾರಿಗಳು ಸೂಚನೆ ನೀಡಿದರು.
ರಸ್ತೆ ಬದಿಯಲ್ಲಿ ಟೆಂಟ್ ಹಾಕಬೇಡಿ. ಅದರ ಬದಲು ಪರಿಹಾರ ಕೇಂದ್ರಕ್ಕೆ ಹೋಗಿ ಎಂದು ಅಧಿಕಾರಿಗಳು ತಿಳಿ ಹೇಳಿ ಮನವೊಲಿಸಲು ಯತ್ನಿಸಿದರು. ಅಧಿಕಾರಿಗಳು ಮನವೊಲಿಕೆಗೆ ಪ್ರಯತ್ನಿಸಿದರೂ ಸ್ಥಳಿಯರು ಮಾತ್ರ ಪಟ್ಟು ಬಿಡಲಿಲ್ಲ. ಶಾಶ್ವತ ಪರಿಹಾರ ಕಲ್ಪಿಸುವ ವರೆಗೆ ಇಲ್ಲಿಂದ ಹೋಗೊದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು.
ಲಖಮಾಪೂರ, ಬೆಳ್ಳೇರಿ ಗ್ರಾಮದ ಭಾಗದ ನೂರಾರು ಎಕರೆಯಲ್ಲಿ ಬೆಳೆದ ಬೆಳೆ ನೀರು ಪಾಲಾಗಿದೆ. ಪ್ರವಾಹದಿಂದಾಗಿ ಕಬ್ಬು, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ, ಹೆಸರು ಬೆಳೆ ಹಾನಿಯಾಗಿದ್ದು, ಪ್ರವಾಹದ ಅಬ್ಬರಕ್ಕೆ ರೈತರ ಬದುಕು ಕೊಚ್ಚಿ ಹೋಗಿದೆ. ಲಕ್ಷಾಂತರ ಸಾಲಸೋಲ ಮಾಡಿ ಬೆಳೆದ ಬೆಳೆ ನೀರು ಪಾಲಾಗಿದೆ. ಇದರಿಂದ ರೈತ ಸಮುದಾಯ ಕಂಗಾಲಾಗಿದೆ.
ನಿನ್ನೆಯೇ ಸಚಿವರು, ಅಧಿಕಾರಿಗಳು ನದಿ ಪಾತ್ರದ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ಬಿಟ್ಟು ಬರುವಂತೆ ಮನವಿ ಮಾಡಿದ್ದರು. ಆದಾಗ್ಯು ಇನ್ನೂ ಹಲವರು ಗ್ರಾಮದಲ್ಲೇ ಉಳಿದಿದ್ದಾರೆ.
ಬೆಳಗ್ಗೆಯೇ ಶೆಡ್ ನಿರ್ಮಾಣಕ್ಕೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಗ್ರಾಮಕ್ಕೆ ಭೇಟಿ ನೀಡಿ ನಾಳೆಯೊಳಗೆ ಶೆಡ್ ನಿರ್ಮಾಣದ ಭರವಸೆ ನೀಡಿದರು.