ಬೆಂಗಳೂರು : ಜನಪ್ರಿಯ ಟಿವಿ ಧಾರಾವಾಹಿ ಜೊತೆ ಜೊತೆಯಲಿ ನಿರ್ದೇಶಕ ಆರೂರು ಜಗದೀಶ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರನ್ನು ಕಳೆದ ಒಂದು ವಾರದಿಂದ ಜಗದೀಶ್ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಪತಿ ಅನಾರೋಗ್ಯಕ್ಕೀಡಾದ ಬಗ್ಗೆ ಜಗದೀಶ್ ಪತ್ನಿ ಹಾಗೂ ಜೆಎಸ್ ಪ್ರೊಡಕ್ಷನ್ನ ಮಾಲೀಕರಾದ ನಿರ್ಮಾಪಕಿ ಸ್ಮಿತಾ ಜಗದೀಶ್ ಸಾಮಾಜಿಕ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ಪತಿ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಅವರ ಬದಲು ಅವರ ಪತ್ನಿಯಾದ ನಾನು ಪತಿಯ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಲಾಕ್ ಡೌನ್ ಬಳಿಕ ಮತ್ತೆ ಪ್ರಾರಂಭವಾಗಿತ್ತು. ಏಪ್ರಿಲ್ 25ರಿಂದ ಚಿತ್ರೀಕರಣ ಪ್ರಾರಂಭಿಸಿದ್ದ ತಂಡದೊಡನೆ ನಿರ್ದೇಶಕ ಜಗದೀಶ್ ಸಕ್ರೀಯವಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಒಂದು ವಾರದ ಹಿಂದೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಧ್ಯ ಮತ್ತೆ ಲಾಕ್ ಡೌನ್ ಇರುವ ಕಾರಣ ಚಿತ್ರೀಕರಣವೂ ಸ್ಥಗಿತವಾಗಿದೆ.