ಗದಗ: ಜಿಲ್ಲೆಯಾದ್ಯಂತ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಜುಲೈ 17 ರ ರಾತ್ರಿ 8 ಗಂಟೆಯಿಂದ ಜುಲೈ 27 ರ ಬೆಳಿಗ್ಗೆ 5 ಗಂಟೆಯವರೆಗೆ ಕೆಲವೊಂದು ವಿನಾಯಿತಿ ನೀಡಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ನಿಷೇಧಾಜ್ಞೆ ಆದೇಶ ಹೊರಡಿಸಿರುತ್ತಾರೆ.

ಪ್ರತಿಬಂಧಕ ಚಟುವಟಿಕೆಗಳು ಜಿಲ್ಲೆಯಾದ್ಯಂತ ಬೆಳಿಗ್ಗೆ 5 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಮಾತ್ರ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳು ಮತ್ತು ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅನುಮತಿಸಲಾಗಿದೆ.

65 ವರ್ಷದ ಮೇಲ್ಪಟ್ಟ ಹಿರಿಯ ನಾಗರೀಕರನ್ನು, 10 ವರ್ಷದೊಳಗಿನ ಮಕ್ಕಳನ್ನು, ಯಾವುದೇ ರೋಗವನ್ನು ಹೊಂದಿರುವ ರೋಗಗ್ರಸ್ಥ ವ್ಯಕ್ತಿಗಳನ್ನು ಹಾಗೂ ಗರ್ಭಿಣಿಯರನ್ನು ಆರೋಗ್ಯ, ಅವಶ್ಯಕ ಪೂರೈಕೆಗಳಂತಹ ಅನಿವಾರ್ಯ ಕಾರಣಗಳಲ್ಲದ ಹೊರತು ಕಡ್ಡಾಯವಾಗಿ ಅವರ ಮನೆಯಲ್ಲಿಯೇ ಇರುವಂತೆ ಸೂಚಿಸಿದೆ. ಯಾವುದೇ ಬೃಹತ್ ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಸಂತೆ, ಜಾತ್ರೆ, ಧಾರ್ಮಿಕ, ಸಾಮಾಜಿಕ ಗುಂಪು ಸೇರುವುದನ್ನು ನಿರ್ಭಂದಿಸಲಾಗಿರುತ್ತದೆ. ಈ ಆದೇಶದ ದಿನಾಂಕದ ಮೊದಲು ನಿಶ್ಚಯಿಸಿದ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆದುಕೊಂಡ ವಿವಾಹ ಕಾರ್ಯಕ್ರಮಗಳಿಗೆ ಈ ಮೊದಲು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ. ಶವ ಸಂಸ್ಕಾರ ಕಾರ್ಯಕ್ಕೆ ಈ ಮೊದಲು ನಿಗದಿಪಡಿಸಿದಂತೆ ಅನುಮತಿಸಲಾಗಿದೆ. ಎಲ್ಲಾ ಸಾರ್ವಜನಿಕ ಸ್ಥಳ, ಅಂಗಡಿಗಳಲ್ಲಿ ಒಂದು ಮೀಟರ್ ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳತಕ್ಕದ್ದು. ಹಾಗೂ ಸ್ಯಾನಿಟೈಸರ್ ಮತ್ತು ಮಾಸ್ಕ್ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರಿ/ಖಾಸಗಿ ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಹೊಂದಿರತಕ್ಕದ್ದು. ಸಾರ್ವಜನಿಕ ತುರ್ತು ಸೇವೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾದರು, ಕೋವಿಡ್-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳನ್ನು ಜಿಲ್ಲೆಯಾದ್ಯಂತ ಅನುಸರಿಸುವುದು.
ಕಂಟೈನ್ಮೆಂಟ್ ವಲಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಟ್ಟುನಿಟ್ಟಿನ ನಿರ್ಬಂಧನೆಗಳು ಇರುವುದರಿಂದ ಈ ಆದೇಶ ಅನ್ವಯಿಸುವುದಿಲ್ಲ. ಸರಕಾರದ ಆದೇಶದನ್ವಯ ದಿನಾಂಕ: 19-07-2020 ಮತ್ತು ದಿನಾಂಕ: 26-07-2020 ರ ರವಿವಾರಗಳಂದು ಸಂಪೂರ್ಣ ಲಾಕ್‍ಡೌನ್ ಅಂತಾ ಈ ಕಾರ್ಯಾಲಯದಿಂದ ಹೊರಡಿಸಿದ ಆದೇಶವು ಯಥಾ ಪ್ರಕಾರ ಜ್ಯಾರಿಯಲ್ಲಿರುತ್ತದೆ.

ವಿನಾಯ್ತಿಗಳು
ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಉದ್ಯೋಗ ಖಾತ್ರಿ ಕೆಲಸಕ್ಕೆ ಯಾವುದೇ ನಿರ್ಬಂದವಿರುವುದಿಲ್ಲ. ಬ್ಯಾಂಕ್ ಗಳು, ಪೋಸ್ಟ್ ಅಫೀಸ್ ಗಳು, ಬಿ.ಎಸ್.ಎನ್.ಎಲ್. ಅಫೀಸುಗಳು, ಸರ್ಕಾರಿ ಕಛೇರಿಗಳು ಮತ್ತು ಇನ್ನಿತರೆ ಅಗತ್ಯ ಸೇವೆಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ. ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು ಇತ್ಯಾದಿ ತುರ್ತು ಸೇವೆಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ. ಎಲ್ಲಾ ತರಹದ ಆಹಾರ ಧಾನ್ಯಗಳ ಸಂಸ್ಕರಣೆ ಘಟಕಗಳು ಮತ್ತು ಎಲ್ಲಾ ತರಹದ ಕಾರ್ಖಾನೆಗಳಿಗೆ ಈ ಆದೇಶ ಅನ್ವಯವಾಗುವದಿಲ್ಲ.
ವ್ಯಕ್ತಿಗಳು ಮತ್ತು ಸರಕುಗಳ ಅಂತರ-ರಾಜ್ಯ ಮತ್ತು ಅಂತರ-ಜಿಲ್ಲೆ ಚಲನೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಅಂತಹ ಚಲನೆಗೆ ಪ್ರತ್ಯೇಕ ಅನುಮತಿ / ಅನುಮೋದನೆ/ ಇ-ಪರ್ಮಿಟ್ ಅಗತ್ಯವಿಲ್ಲ. ಆದಾಗ್ಯೂ, ಇತರ ರಾಜ್ಯಗಳಿಂದ ರಾಜ್ಯಕ್ಕೆ ಬರುವ ಜನರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಕಂದಾಯ ಇಲಾಖೆ (ಡಿಎಂ) ಹೊರಡಿಸಿರುವ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳು / ಎಸ್.ಓ.ಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಎಲ್ಲಾ ಸಾರ್ವಜನಿಕ ಉಪಯುಕ್ತತೆಗಳಾದ ನೀರು, ನೈರ್ಮಲ್ಯ, ವಿದ್ಯುತ್ ಕಾರ್ಯಗಳು, ಹಾಲು ಪೂರೈಕೆ ಮತ್ತು ಪೆಟ್ರೋಲ್ / ಡಿಸೈಲ್ ಬಂಕ್ ಗಳು ಮತ್ತು ಇತರೆ ಅಗತ್ಯತೆ ಸೇವೆಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ.
ಸಾರ್ವಜನಿಕ ತುರ್ತು ಸೇವೆಗೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಆಗಮಿಸುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನಿನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಂಘಗಳಲ್ಲಿ ಪಡೆದ ಸಾಲದ ಪೂರ್ತಿಬಾಕಿ ಕಟ್ಟಬೇಕು ಎಂಬ ಆದೇಶ ಹಿಂಪಡೆಯಲು ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಸಹಕಾರ ಸಂಘಗಳ ಮೂಲಕ ಸದಸ್ಯರು ಪಡೆದಿರುವ ಸಾಲ/ಕಂತುಗಳ ಪಾವತಿಯನ್ನು ಮುಂದೂಡಿರುವ ಸರ್ಕಾರ ಜೂನ್ ಬಳಿಕ ಪೂರ್ತಿ ಬಾಕಿ ಕಟ್ಟಬೇಕು ಎಂದು ಆದೇಶ ಹೊರಡಿಸಿದೆ. ಈ ಸುತ್ತೋಲೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ಚಸ್ ಅಲ್ಲೋ ಮಾರಾಯ ಚೀಯರ್ಸ್ ಅನ್ನು ಶು..!! ಇಂಗ್ಲೀಷ್ ಬ್ಯಾಡ ಕನ್ನಡದಾಗ ಹೇಳು..!

ಶು..!, ಕರ್ನಾಟಕದಾಗ ಹುಟ್ಟಿ ಚೆಸ್ ಅಂತ ಇಂಗ್ಲೀಷ್ ನ್ಯಾಗ್ ಹೇಳ ಬ್ಯಾಡ್ರಿ ಅಂದ, ಕನ್ನಡಾಭಿಮಾನಿಗಳು ಯಾರಾದ್ರು ಕೇಳಿಸಿಕೊಂಡ್ರ ಕುಡುಕರೆಲ್ಲ ಕನ್ನಡ ಬಿಟ್ಟು ಇಂಗ್ಲೀಷ್ ಮಾತಾಡಾಕತ್ಯಾರ ಅಂತ ಸ್ಟ್ರೈಕ್ ಮಾಡಿ ಬಾರ್ ಬಂದ್ ಮಾಡಿಸಿಗಿಡಿಸ್ಯಾರೋ ಮಾರಾಯ್ರ.