ಬೆಳಗಾವಿ: ಕೋವಿಡ್ ನಿಂದಾದ ಸಾವು ಎಂದು ಆರೋಗ್ಯ ಇಲಾಖೆ ದೃಢಪಡಿಸಿದ ಪ್ರಕರಣ ಈಗ ಜಿಲ್ಲೆಯಲ್ಲಿ ವಿವಾದ, ಗೊಂದಲಗಳಿಗೆ ಕಾರಣವಾಗಿದೆ.
ರಾಜ್ಯ ಹೆಲ್ತ್ ಬುಲೆಟಿನ್ ಪ್ರಕಾರ, ಗೋಕಾಕ್ ತಾಲೂಕಿನ ಕೊಣ್ಣೂರಿನ 55 ವರ್ಷದ ಮಹಿಳೆಯೊಬ್ಬರು ಕೊವಿಡ್ ನಿಂದ ಮೃತರಾಗಿದ್ದಾರೆ. ಈ ಮಾಹಿತಿಯನ್ನು ಜಿಲ್ಲಾಡಳಿತ ರಾಜ್ಯ ಆರೋಗ್ಯ ಇಲಾಖೆಗೆ ಕಳಿಸಿತ್ತು. ಜಿಲ್ಲಾ ವೈದ್ಯಾಧಿಕಾರಿಗಳು ಟೆಸ್ಟ್ ವರದಿ ಬರುವ ಮುನ್ನವೇ ಸಾವು ಕೊವಿಡ್ ನಿಂದ ಸಂಭವಿಸಿದೆ ಎಂದು ನಿರ್ಧರಿಸಿದ ವಿಚಾರವೀಗ ವಿವಾದಕ್ಕೆ ಕಾರಣವಾಗಿದೆ.
ಇದಕ್ಕೆ ಮುಖ್ಯ ಕಾರಣ, ಮೃತ ಮಹಿಳೆಯನ್ನು ಮೊದಲು ಪರೀಕ್ಷಿಸಿದ್ದ ಕೊಣ್ಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಬಾಲುಕುಮಾರ್ ನೀಡಿರುವ ವಿಡಿಯೋ ಹೇಳಿಕೆ. ‘ಮಹಿಳೆಗೆ ಪಾಸಿಟಿವ್ ಇರಲಿಲ್ಲ. ಸಕ್ಕರೆ ಕಾಯಿಲೆ ಅಧಿಕಗೊಂಡಿತ್ತು. ಹೆಚ್ಚಿನ ಚಿಕಿತ್ಸೆಗೆಂದು ಬೆಳಗಾವಿ ಆಸ್ಪತ್ರೆಗೆ ಕಳಿಸಲಾಗಿತ್ತು. ಅದ್ಹೇಗೋ ಗೊತ್ತಿಲ್ಲ, ಅಲ್ಲಿ ಅವರನ್ನು ಕೊವಿಡ್ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಮಹಿಳೆಗೆ ಪಾಸಿಟಿವ್ ಇರಲಿಲ್ಲ. ಮಹಿಳೆ ಸಾವು ಸಕ್ಕರೆ ಕಾಯಿಲೆಯಿಂದ ಸಂಭವಿಸಿದೆ. ಕೊಣ್ಣೂರಿನಲ್ಲಿ ಸೋಂಕಿನ ಆತಂಕ ಬೇಡ’ ಎಂದು ಅವರು ಹೇಳಿದ್ದಾರೆ. ಇದರಿಂದ ಕೊಣ್ಣೂರಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ವಿಡಿಯೋ ಹೇಳಿಕೆ ನೀಡಿದ ವೈದ್ಯರಿಗೆ ಡಿಸಿ ಎಂ.ಜಿ. ಹಿರೇಮಠರು ನೋಟಿಸ್ ನೀಡಿ, ಸಾವು ಯಾವುದರಿಂದ ಸಂಭವಿಸಿತು ಎಂಬುದನ್ನು ನಂತರ ತಿಳಿಸುವೆ ಎಂದಿದ್ದಾರೆ.
ಹಿಂದೆ ಹಿರೇಮಠರು ಗದಗ ಜಿಲ್ಲಾಧಿಕಾರಿಯಾಗಿದ್ದಾಗಲೂ ಕೊವಿಡ್ ವಿಷಯದಲ್ಲಿ ಕೆಲವು ಗೊಂದಲ ಸೃಷ್ಟಿಯಾಗಿದ್ದನ್ನು ಇಲ್ಲಿ ನೆನೆಯಬಹುದು.