ಕೊರೋನಾ ಲಸಿಕೆ ಉತ್ಪಾದನೆ ಹೇಗೆ?

ದೆಹಲಿ: ಜುಲೈ 3 ಶುಕ್ರವಾರದಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಪ್ರಕಟಣೆಯಲ್ಲಿ ಅಗಸ್ಟ್ 15ಕ್ಕೆ ದೇಶದಲ್ಲಿ ಮೊದಲ ಕೊರೋನಾ ಲಸಿಕೆ/ಮೆಡಿಸಿನ್ ಕೊವಾಕ್ಸಿನ್ ಸಿದ್ಧವಾಗಲಿದೆ ಎಂದು ತಿಳಿಸಿದೆ.
ಇನ್ನು 45 ದಿನಗಳಲ್ಲಿ ಇದು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆಗೆ ತಜ್ಞರು ಏನು ಹೇಳುತ್ತಾರೆ ಎಂದು ಪರಿಶೀಲಿಸುತ್ತಲೇ, ಲಸಿಕೆ ಉತ್ಪಾದಿಸುವ ಪ್ರಕ್ರಿಯೆ, ಅದರಲ್ಲಿ ಕೊರೋನಾ ವೈರಸ್ ಅನ್ನು ನಿಷ್ಕ್ರಿಯಗೊಳಿಸುತ್ತಾರೋ ಅಥವಾ ನಿರ್ಜೀವಗೊಳಿಸುತ್ತಾರೋ ಎಂಬ ವಿವರಗಳು ಇಲ್ಲಿವೆ.
‘ಬೇಗ ಸಿದ್ಧವಾದಷ್ಟು ಒಳ್ಳೆಯದೇ. ಆದರೆ ಐಸಿಎಂಆರ್ನ ಈ ಆಶಾವಾದ ಜಾರಿಗೆ ಬರಲು ಉಳಿದಿರುವ 45 ದಿನ ಸಾಕಾಗುವುದಿಲ್ಲ. ಹೀಗಾಗಿ ಇದೊಂದು ಅವಾಸ್ತವಿಕ ಆಶಾವಾದ’ ಅನ್ನೋದು ಕೆಲವು ಔಷಧ ತಯಾರಿಕಾ ತಜ್ಞರ ಅಭಿಪ್ರಾಯ.


ಯಾವುದೇ ಲಸಿಕೆಯನ್ನು ಮೊದಲು ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿ ಪರೀಕ್ಷಿಸಬೇಕು. ಕೊರೋನಾ ವಿಷಯದಲ್ಲಿ ಮೊದಲು ಆ ಪ್ರಾಣಿಗೆ ಸೋಂಕು ತಗುಲಿಸಬೇಕು. ಆ ಪ್ರಾಣಿಯಲ್ಲಿ ಕೊರೋನಾ ನಿಷ್ಕ್ರಿಯಗೊಳಿಸುವ ರೋಗ ನಿರೋಧಕ ಶಕ್ತಿ ಸೃಷ್ಟಿಯಾದ ನಂತರ ಮನುಷ್ಯರ ಮೇಲೆ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತವೆ. ಕ್ಲಿನಿಕಲ್ ಟ್ರಯಲ್ಸ್ ಎಂಬ ಈ ಪ್ರಕ್ರಿಯೆ ಸಾಕಷ್ಟು ಸಮಯವನ್ನು ಬೇಡುತ್ತದೆ. ಸೋಂಕು ತೀವ್ರವಾಗಿರುವ ಪ್ರದೇಶದಲ್ಲಿ ವಿವಿಧ ವಯೋಮಾನದ ಸಾಕಷ್ಟು ಜನರ ಮೇಲೆ ಇದನ್ನು ಪ್ರಯೋಗ ಮಾಡಿ ಯಶಸ್ವಿಯಾದರೆ ಮಾತ್ರ ಅದನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ.
ಸೋಂಕಿನ ಲಕ್ಷಣ ಇದ್ದವರು, ಇಲ್ಲದವರು, ಉಸಿರಾಟ ಸಂಬಂಧಿ ಮತ್ತು ಇತರ ಕಾಯಿಲೆ ಇರುವವರು, ವೃದ್ಧರು, ಮಕ್ಕಳು, ಮಹಿಳೆಯರನ್ನೆಲ್ಲ ಪ್ರಯೋಗಕ್ಕೆ ಒಳಪಡಿಸಿ ಫಲಿತಾಂಶಕ್ಕೆ ಕಾಯಬೇಕು. ಐಸಿಎಂಆರ್ ಒಪ್ಪಿಗೆ ಪಡೆದು ಮೆಡಿಸಿನ್ ಸಿದ್ಧತೆಯಲ್ಲಿ ತೊಡಗಿರುವ ಭಾರತ್ ಬಯೋಟೆಕ್ ಕಂಪನಿ ಇನ್ನೂ ಕ್ಲಿನಿಕಲ್ ಟ್ರಯಲ್ಸ್ ಹಂತಕ್ಕೆ ಬಂದಿಲ್ಲ.
ವೈರಾಲಜಿಸ್ಟ್ ಡಾ. ಜಾಕಬ್ ಹೇಳಿದ್ದೇನು?
‘ಈಗ ಉಳಿದ 45 ದಿನದಲ್ಲಿ ಮೊದಲ ಎರಡು ಹಂತ ಮುಗಿಸಬಹುದು. ಮೂರನೆ ಹಂತ ಮತ್ತು ನಂತರದ ಪ್ರಮುಖ ಹಂತಗಳನ್ನು ಮುಗಿಸಲು ದೀರ್ಘಾವಧಿ ಬೇಕು. ಹೀಗಾಗಿ ಐಸಿಎಂಆರ್ ಪ್ರಕಟಣೆ ನೀಡಲು ಆತುರ ತೋರಿದೆ ಎನ್ನುತ್ತಾರೆ ವೈರಾಲಜಿಸ್ಟ್ ಮತ್ತು ಅಂತಾರಾಷ್ಟ್ರೀಯ ಮಟ್ಟದ ಎಥಿಕ್ಸ್ ಪರಿಣಿತ ಡಾ.ಜಾಕಬ್ ಜಾನ್.
ಎರಡು ವಿಧಾನಗಳು
ವೈರಸ್ಗೆ ಸಂಬಂಧಿಸಿದ ರೋಗ/ಕಾಯಿಲೆ ಗುಣಪಡಿಸಲು ಎರಡು ವಿಧಾನ ಅನುಸರಿಸುತ್ತಾರೆ. ರೋಗಕ್ಕೆ ಕಾರಣವಾಗುವ ವೈರಸ್ ಅನ್ನು ಲಸಿಕೆಯಲ್ಲಿ ನಿಷ್ಕ್ರಿಯಗೊಳಿಸುತ್ತಾರೆ ಅಥವಾ ನಿರ್ಜೀವ ಸ್ಥಿತಿಗೆ ತಳ್ಳುತ್ತಾರೆ. ಸದ್ಯ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಗಳಲ್ಲಿ ಈ ಎರಡೂ ವಿಧಾನದ ಬದಲು ಪರ್ಯಾಯ ಮಾರ್ಗ ಹಿಡಿದಿದ್ದಾರೆ. ಆದರೆ ಭಾರತ ಬಯೋಟೆಕ್ ಈ ಎರಡು ವಿಧಾನಗಳಲ್ಲೇ ಮುಂದುವರೆದಿದ್ದು ಆಶ್ಚರ್ಯಕರ ಎಂದು ಇನ್ನೊಬ್ಬ ವೈರಾಲಜಿಸ್ಟ್ ಡಾ. ಅನಂತ್ ಭಾನ್ ಹೇಳಿದ್ದಾರೆ.
ಕ್ಲಿನಿಕಲ್ ಟ್ರಯಲ್ ಮುಖ್ಯ
ಯಾವುದೇ ಒಂದು ಲಸಿಕೆ/ಔಷಧಿಗೆ ಅಂತಿಮ ಅನುಮತಿ ನೀಡಲು, ಲಸಿಕೆಯನ್ನು ಸಾಕಷ್ಟು ಜನರ ಮೇಲೆ ಪ್ರಯೋಗ ಮಾಡಿ ಕ್ಲಿನಿಕಲ್ ಟ್ರಯಲ್ ನಡೆಸಬೇಕು. ಇದಕ್ಕೆ ತುಂಬ ಸಮಯ ಹಿಡಿಯುತ್ತದೆ. ಹೀಗಿರುವಾಗ ಐಸಿಎಂಆರ್ ಅಗಸ್ಟ್ 15ಕ್ಕೆ ಲಸಿಕೆ ಸಿದ್ಧ ಎಂದು ಪ್ರಕಟಣೆ ನೀಡಿದ್ದನ್ನು ಹಲವಾರು ತಜ್ಞರು ಅವಾಸ್ತವಿಕ ಎಂದಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಸಂಕಷ್ಟ: ತುರ್ತು ಸಭೆ ಕರೆದ ಸಿಎಂ ಯಡಿಯೂರಪ್ಪ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ತುರ್ತು ಸಭೆ…

ಹೆಚ್ಚು ಮದ್ಯ ಕುಡಿದಿದ್ದಾನೆ ಎಂಬ ಕಾರಣಕ್ಕೆ ಕೊಲೆ!

ತಮಗಿಂತ ಹೆಚ್ಚು ಮದ್ಯ ಸೇವನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಗೆಳೆಯನನ್ನೇ ಕೊಲೆ ಮಾಡಿರುವ ಘಟನೆ ಇಲ್ಲಿಯ ಆರ್.ಟಿ. ನಗರದಲ್ಲಿ ನಡೆದಿದೆ.

ಭಾರಿ ಮಳೆಗೆ ಹಾರಿ ಹೋದ ಮೇಲ್ಛಾವಣಿ

ಹಾವೇರಿ: ಜಿಲ್ಲೆಯಾದ್ಯಂತ ಬಿರುಗಾಳಿ ಸಮೇತ ಮಳೆ ಹಿನ್ನೆಲೆ ಬಿರುಗಾಳಿ ಹೊಡೆತಕ್ಕೆ ಸರ್ಕಾರಿ ಶಾಲೆಯ ಚಾವಣಿ ಹಾರಿ…

ದೆಹಲಿಯಲ್ಲಿ ಮೂರನೇ ಅಲೆ ಶುರುವಾಗಿದೆಯೇ?

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಮಹಾಮಾರಿಯ ಅಬ್ಬರ ಶುರುವಾಗಿದೆ. ಅಲ್ಲದೇ, ನಗರದಲ್ಲಿ ಮೂರನೇ ಅಲೆ ಶುರುವಾಗಿದೆ ಎಂಬ ಆತಂಕ ಶುರುವಾಗಿತ್ತು. ಸದ್ಯ ಮೂರನೇ ಅಲೆ ಶುರುವಾಗಿರುವುದನ್ನು ಸ್ವತಃ ಸಿಎಂ ಅರವಿಂದ್ ಕೇಜ್ರಿವಾಲ್ ಅವರೇ ಒಪ್ಪಿಕೊಂಡಿದ್ದಾರೆ.