ಹುಬ್ಬಳ್ಳಿ : ಕೊರೊನಾ ಮಹಾಮಾರಿಗೆ ಇಡೀ ದೇಶವೇ ನಲುಗುತ್ತಿದೆ. ಪ್ರತಿಯೊಂದು ಕ್ಷೇತ್ರಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಹೀಗೆ ಆರ್ಥಿಕ ಸಂಕಷ್ಟಕ್ಕೆ ಒದ್ದಾಡುತ್ತಿರುವ ವಾಯುವ್ಯ ಸಾರಿಗೆ ಸಂಸ್ಥೆ ಸಿಬ್ಬಂದಿ ಕಡಿತಗೊಳಿಸಲು ಮುಂದಾಗಿದೆ.
ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ವಿಆರ್ ಎಸ್ (ವಾಲಂಟರಿ ರಿಟೈರ್ಮೆಂಟ್ ಸಿಸ್ಟಮ್) ನೀಡಲು ಮುಂದಾಗಿದೆ. ಜೊತೆಗೆ ನಷ್ಟ ಸರಿಪಡಿಸಲು ಸಂಸ್ಥೆಯಲ್ಲಿನ ಬಡ್ತಿ ಹೊಂದುವ ಹುದ್ದೆಗಳ ಕಡಿತ ಹಾಗೂ ವಿಲೀನ ಮಾಡಲು ಮುಂದಾಗಿದೆ.
ಈ ಕುರಿತು ಸಂಸ್ಥೆ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ. ಸೋಂಕಿನಿಂದ ವೃದ್ಧರೇ ಹೆಚ್ಚಾಗಿ ಬಲಿಯಾಗುತ್ತಿರುವುದರಿಂದಾಗಿ ಕೆಲಸ ಮಾಡುವ 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ವಿ ಆರ್ ಎಸ್ ನೀಡಲು ಮುಂದಾಗಿದೆ. ಆದರೆ, ಈ ನಿರ್ಧಾರವನ್ನು ಸಿಬ್ಬಂದಿಗಳು ವಿರೋಧಿಸುತ್ತಿದ್ದಾರೆ. ಅನಾವಶ್ಯಕ ಖರ್ಚುಗಳಿಗೆ ಸರ್ಕಾರ ಬ್ರೇಕ್ ಹಾಕಲಿ ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿ ಹೇಳುತ್ತಾರೆ.
ಕೊರೊನಾ ಬಂದ ನಂತರ ಕೇಂದ್ರ ಸರ್ಕಾರ ನೌಕರರನ್ನು ಕೆಲಸದಿಂದ ತೆಗೆಯದಂತೆ ಆದೇಶ ಹೊರಡಿಸಿದೆ. ಆದರೆ, ಸಾರಿಗೆ ಸಂಸ್ಥೆ ಈ ನಿರ್ಧಾರ ಕೈಗೊಳ್ಳುಲು ಮುಂದಾಗಿರುವುದು ಮಾತ್ರ ನೌಕರ ವಿರೋಧಿ ನೀತಿಯಾಗಿದೆ.