ಬೆಂಗಳೂರು: ಶಿಕ್ಷಕರ ವರ್ಗಾವಣಾ ಕಾಯ್ದೆಯನ್ನು ಸಂಪೂರ್ಣ ಶಿಕ್ಷಕ ಸ್ನೇಹಿ ವರ್ಗಾವಣಾ ಕಾಯ್ದೆಯಾಗಿ ರೂಪಗೊಳ್ಳಬೇಕಾದರೆ ಕೆಲವು ಅಂಶಗಳನ್ನು ಅಳವಡಿಸಿಕೊಂಡು ಅಂತಿಮ ನಿಯಮಗಳನ್ನು ಹಾಗೂ ಮಾರ್ಗಸೂಚಿಗಳನ್ನು ಪ್ರಕಟಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಕುರಿತು ಇಂದು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಶೇ. 25ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳಿರುವ ತಾಲ್ಲೂಕಿನಿಂದ ವರ್ಗಾವಣೆ ಇಲ್ಲವೆಂಬ ಅಂಶ ಅತ್ಯಂತ ಮಾರಕವಾಗಿದ್ದು ಮತ್ತು ಶಿಕ್ಷಕ ಭಾದಕ ನಿಯಮವಾಗಿದ್ದು, ಇದನ್ನು ಸಂಪೂರ್ಣವಾಗಿ ಕೈಬಿಡಬೇಕು. ಏಕೆಂದರೆ, ಘಟಕದ ಹೊರಗಿನ ವರ್ಗಾವಣಾ ಮಿತಿಯು ಕೇವಲ (2+2) ಆಗಿದ್ದು, ಯಾವುದೇ ತಾಲೂಕಿನಿಂದ ಇದಕ್ಕಿಂತ ಹೆಚ್ಚಿನ ಶೇಕಡಾವಾರು ಶಿಕ್ಷಕರು ವರ್ಗಾವಣೆ ಹೊಂದುವುದಕ್ಕೆ ಸಾಧ್ಯವೇ ಇಲ್ಲ. ಶೇಕಡಾವಾರು ಮಿತಿಯಲ್ಲಿ ವರ್ಗಾವಣೆ ಜಾರಿಯಾಗುವುದರಿಂದ ಮತ್ತೆ ಶೇ. 25ಕ್ಕಿಂತ ಹೆಚ್ಚು ಖಾಲಿ ಇರುವ ತಾಲ್ಲೂಕಿನಿಂದ ವರ್ಗಾವಣೆ ನೀಡದೇ ಇರುವುದು ಆ ತಾಲ್ಲೂಕಿನ ಶಿಕ್ಷಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಹೀಗಾಗಿ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಈ ಅಂಶವನ್ನು ಕೈ ಬೀಡಬೇಕೆಂದು ಒತ್ತಾಯಿಸಿದ್ದಾರೆ.
ಇಲಾಖೆ ನಮ್ಮ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ಶಿಕ್ಷಕರಿಗೆ ಅನುಕೂಲ ಮಾಡಿ ಕೊಡುತ್ತದೆ ಎನ್ನುವ ನಂಬಿಕೆ ನಮಗಿದೆ. ಈಗಾಗಲೇ ಈ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ನಮ್ಮ ಮನವಿಗೆ ಸಚಿವರು ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸವಿದೆ. ಚಂದ್ರಶೇಖರ್ ಎನ್.ಎಸ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಪ್ರಸ್ತುತ ಕರಡು ನಿಯಮದಲ್ಲಿ ನಮೂದಿಸಿದ ನಿಯಮ 1) ಶೇ. 25ಕ್ಕಿಂತ ಹೆಚ್ಚು ಖಾಲಿ ಇರುವ ತಾಲ್ಲೂಕಿನಿಂದ ವರ್ಗಾವಣೆಗೆ ಅವಕಾಶವಿಲ್ಲ ಎಂಬ ಅಂಶ ಅತ್ಯಂತ ಮಾರಕವಾಗಿದ್ದು, ಮತ್ತು ಶಿಕ್ಷಕ ಬಾದಕ ನಿಯಮವಾಗಿದ್ದು, ಇದನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು. 2) ಪರಸ್ಪರ ವರ್ಗಾವಣೆ ನಿಯಮಕ್ಕೆ ಸಂಬಂಧಿಸಿದ ಆಕ್ಷೇಪಣೆಗಳು 3) ಸಿ.ಆರ್.ಪಿ / ಬಿ.ಆರ್.ಪಿ /ಇ.ಸಿ.ಓ ಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು
ಕರಡು ನಿಯಮಕ್ಕೆ ಆಕ್ಷೇಪಣೆ
1) ಶೇ.25ಕ್ಕಿಂತ ಹೆಚ್ಚು ಹುದ್ದೆಗಳು ಯಾವ ತಾಲೂಕಿನಲ್ಲಿ ಖಾಲಿ ಇವೆಯೋ, ಆ ತಾಲೂಕಿನಿಂದಲೂ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು.
2) ಶೇ.25ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆಯೋ, ಆ ತಾಲೂಕಿನಿಂದ ಘಟಕ/ ಅಂತರ್ಘಟಕ ವರ್ಗಾವಣೆ ಇಲ್ಲ ಎಂಬ ಅವೈಜ್ಞಾನಿಕ ನಿಯಮಗಳನ್ನು ಹಿಂತೆಗೆಯಬೇಕು.
3) ಒಂದು ಬಾರಿಯೂ ವರ್ಗಾವಣೆ ಆಗದೇ ಇರುವ 10 ವರ್ಷಕ್ಕಿಂತಲೂ ಹೆಚ್ಚಿನ ಸೇವೆ ಸಲ್ಲಿಸಿದ ಹೈದ್ರಾಬಾದ್-ಕರ್ನಾಟಕದ ಶಿಕ್ಷಕರಿಗೆ ಪ್ರಾಶಸ್ತ್ಯ ನೀಡಬೇಕು. ಮಾನವಿಯತೆ ದೃಷ್ಟಿಯಿಂದ ಕೋರಿಕೆ ಆಧಾರದ ಮೇಲೆ ಸ್ವಂತ ಜಿಲ್ಲೆಗೆ ವರ್ಗಾವಣೆ ಹೊಂದಲು ಒಂದು ಬಾರಿ ಅವಕಾಶ ನೀಡಬೇಕು.
4) ಅಥವಾ ಶೇ.25ರಷ್ಟು ಖಾಲಿ ಹುದ್ದೆಗಳು ಇರುವ ತಾಲ್ಲೂಕಿನಿಂದ ವರ್ಗಾವಣೆ ಇಲ್ಲ ಎಂಬ ನಿಯಮ ಸಡಿಲಗೊಳಿಸಿ ಶೇ.50 ರಷ್ಟು ನಿಗದಿಪಡಿಸಬೇಕು.
5) ಕ್ರಮ ಸಂಖ್ಯೆ 24ರ ಪ್ರಕಾರ ಪರಸ್ಪರ ವರ್ಗಾವಣೆಗೆ ಅರ್ಹತೆ ಕನಿಷ್ಟ 7 ವರ್ಷಗಳ ಸೇವೆ ಕೈಬಿಟ್ಟು 3 ವರ್ಷಕ್ಕೆ ಸಡಿಲಗೊಳಿಸಿ, ಅವಕಾಶ ನೀಡಬೇಕು.
6) ನಿವೃತ್ತಿ ಹೊಂದಲು 5 ವರ್ಷ ಇರುವವರಿಗೆ ಪರಸ್ಪರ ವರ್ಗಾವಣೆ ಬದಲಾಗಿ 3 ವರ್ಷಕ್ಕೆ ನಿಗದಿಗೊಳಿಸಬೇಕು.
7) ಪರಸ್ಪರ ವರ್ಗಾವಣೆ ಘಟಕದ ಹೊರಗೆ ಮಿತಿ ರದ್ದುಪಡಿಸಿ ಮುಕ್ತ ಅವಕಾಶ ನೀಡಬೇಕು.
8) ಮಹಿಳಾ/ಪುರುಷ ಶಿಕ್ಷಕರೆಂದು ವಿಂಗಡಿಸದೇ ಸೇವಾ ಜೇಷ್ಠತೆ ಆಧಾರದ ಮೇಲೆ ಆದ್ಯತೆ ನೀಡಬೇಕು.
9) ಪರಸ್ಪರ ವರ್ಗಾವಣೆ ಸೇರಿದಂತೆ ವರ್ಗಾವಣೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯಲು ಶಿಕ್ಷಕರ ಈಗಿನ ಶಾಲೆಯಲ್ಲಿ ಪೂರ್ಣಗೊಳಿಸಿದ ಕನಿಷ್ಠ ಸೇವಾ ಅವಧಿಯನ್ನು ನಿರ್ಧರಿಸಲು, ಹಿಂದಿನ ವರ್ಷದ ಅಂದರೆ 2019ರ ಡಿಸೆಂಬರ್ 31ನ್ನು ಮಾನದಂಡವಾಗಿ ಇಟ್ಟುಕೊಳ್ಳದೆ ಈ ಹಿಂದೆ ಇದ್ದಂತೆ ವರ್ಗಾವಣೆಗೆ ಸರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಪ್ರಸ್ತುತ ಶಾಲೆಯಲ್ಲಿ ಮೂರು ವರ್ಷ ಸೇವೆ ಪೂರ್ಣಗೊಂಡಿರಬೇಕು ಎಂಬ ನಿಯಮಗಳನ್ನು ಮಾಡಬೇಕು.
10) ಪರಸ್ಪರ ವರ್ಗಾವಣೆ ಸೇರಿದಂತೆ ವರ್ಗಾವಣೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯಲು ಶಿಕ್ಷಕರ ಈಗಿನ ಶಾಲೆಯಲ್ಲಿ ಪೂರ್ಣಗೊಳಿಸಿದ ಕನಿಷ್ಠ ಸೇವಾ ಅವಧಿಯನ್ನು ನಿರ್ಧರಿಸಲು. ಹಿಂದಿನ ವರ್ಷದ ಅಂದರೆ 2019ರ ಡಿಸೆಂಬರ್ 31ನ್ನು ಮಾನದಂಡವನ್ನಾಗಿ ಇಟ್ಟುಕೊಳ್ಳದೆ ಈ ಹಿಂದೆ ಇದ್ದಂತೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಪ್ರಸ್ತುತ ಶಾಲೆಯಲ್ಲಿ ಮೂರು ವರ್ಷ ಸೇವೆ ಪೂರ್ಣಗೊಂಡಿರಬೇಕೆಂಬ ನಿಯಮವನ್ನು ಮಾಡಬೇಕು.
11) ವಿಧವಾ ಪ್ರಕರಣದಲ್ಲಿ 12 ವರ್ಷದೊಳಗಿನ ಮಗು ಇರಬೇಕೆಂಬ ಮಾನದಂಡವನ್ನು ಹೊಂದಿದವರನ್ನು ಮಾತ್ರ ವಿಧವಾ ಪ್ರಕರಣಕ್ಕೆ ಒಳಪಡಿಸಿರುವುದು ವಿಶಾದನೀಯ. ಒಟ್ಟಾರೆಯಾಗಿ ಈ ಹಿಂದಿನ ವರ್ಗಾವಣಾ ನಿಯಮಗಳಂತೆ ಗಂಡನನ್ನು ಕಳೆದುಕೊಂಡ ಎಲ್ಲಾ ಸಹೋದರಿಯರು/ ತಾಯಂದಿರು ಮಕ್ಕಳ ಇರುವಿಕೆ ವಯಸ್ಸನ್ನು ಪರಿಗಣಿಸದೇ ವಿಧವೆಯರೆಂದು ಪರಿಗಣಿಸಿ ನಿಯಮಗಳಲ್ಲಿ ಅಳವಡಿಸಬೇಕಾಗಿ ವಿನಂತಿ.
12) ನಿಯಮ 4(ಬಿ) ಪ್ರಕಾರ ವೈಟೇಜ್ ಸಂಬಂಧಿಸಿದಂತೆ ಹಿಂದಿನ ವರ್ಷದ ಡಿಸೆಂಬರ್ ಅಂತ್ಯ ಮಾಹೆಯನ್ನು ಪರಿಗಣಿಸದೇ, ವರ್ಗಾವಣಾ ಅಂತಿಮ ಮಾರ್ಗಸೂಚಿ ಹೊರಡಿಸಿದ ದಿನಾಂಕವನ್ನು ಪರಿಗಣಿಸಬೇಕು.
13) ನಿಯಮ 4(ಸಿ) ಪ್ರಕಾರ ವೈಟೇಜ್ ಸಮಾನವಾದಾಗ ಮೊದಲು ಜನ್ಮ ದಿನಾಂಕವನ್ನು ಪರಿಗಣಿಸದೆ ಸೇವೆಗೆ ಸೇರಿದ ದಿನಾಂಕವನ್ನು ಪರಿಗಣಿಸಬೇಕು.
14) ನಿಯಮ 5ರ ಪ್ರಕಾರ ಅಂತರ್ ಘಟಕ ವರ್ಗಾವಣಾ ಮಿತಿಯನ್ನು (ವಿಭಾಗದ ಹೊರಗೆ) ಶೇಕಡ 2 ಎಂಬುವುದಾಗಿ ನಿಗದಿಪಡಿಸಿದ್ದು ಸದರಿ ಮಿತಿಯನ್ನು ಶೇಕಡ 6ಕ್ಕೆ ಹೆಚ್ಚಿಸಬೇಕು.
15) ವರ್ಗಾವಣೆ ವಿಧೇಯಕ-10(5)ರ ಪ್ರಕಾರ ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿರುವ ಪ್ರಕರಣದಲ್ಲಿ ಪತಿ-ಪತ್ನಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕಿಗೆ ಮಾತ್ರ ಕೋರಿಕೆ ವರ್ಗಾವಣೆಯನ್ನು ಕೊರುವುದಕ್ಕೆ ಅನುಮತಿಸುವುದು ಎಂದು ತಿಳಿಸಲಾಗಿದೆ.ಆದ್ದರಿಂದ ಒಂದು ವೇಳೆ ಪತಿ-ಪತ್ನಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕಿನಲ್ಲಿ ಖಾಲಿ ಹುದ್ದೆಗಳು ಲಭ್ಯವಿಲ್ಲದಿದ್ದಾಗ ಅಂತರ ಜಿಲ್ಲಾ ದಂಪತಿ ಪ್ರಕರಣದ ಶಿಕ್ಷಕರಿಗೆ ಅನ್ಯಾಯವಾಗುತ್ತದೆ.ಅದಕ್ಕಾಗಿ ಪಕ್ಕದ ತಾಲ್ಲೂಕು/ಜಿಲ್ಲೆಯೊಳಗೆ ಖಾಲಿ ಹುದ್ದೆಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಬೇಕಾಗಿ ಕೋರಿದೆ. (ಹಿಂದಿನ ವರ್ಗಾವಣೆಯಲ್ಲಿ ಈ ರೀತಿ ಅವಕಾಶ ಕಲ್ಪಿಸಲಾಗಿದೆ)
16) 2020ರ ಕಾಯ್ದೆ ಹಾಗೂ ಕರಡು ನಿಯಮಗಳ ಪ್ರಕಾರ 3ವರ್ಷ ಅವಧಿ ಪೂರೈಸಿದ ಸಿಆರ್ ಪಿ/ ಬಿಆರ್ಪಿ/ ಇಸಿಒ ಶಿಕ್ಷಕರಿಗೆ ಕೌನ್ಸಿಲಿಂಗ್ನಲ್ಲಿ ಕೇವಲ ಅವರು ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು/ ಜಿಲ್ಲೆಗಳಲ್ಲಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಬದಲಾಗಿ ಸಿಆರ್ ಪಿ/ ಬಿಆರ್ಪಿ/ ಇಸಿಓ ಅವಧಿ ಪೂರೈಸಿದ ಶಿಕ್ಷಕರು ಬೇರೆ ಜಿಲ್ಲೆಗೆ ವರ್ಗಾವಣೆ ಬಯಸಿದರೆ ಅಂತವರಿಗೆ ಬೇರೆ ಜಿಲ್ಲೆಗೂ ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸುತ್ತೇವೆ.