ಗದಗ: ಜಿಲ್ಲೆಯ ಪಿಎಲ್ಡಿ/ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್) ಬ್ಯಾಂಕ್ ಎಲ್ಲ ಸುಸ್ತಿ ಸಾಲಗಾರರು ಜೂ.30ರೊಳಗೆ ಸುಸ್ತಿ ಸಾಲದ ಅಸಲು ಪಾವತಿಸಿ ಬಡ್ಡಿ ಮನ್ನಾ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕಸ್ಕಾರ್ಡ್ ಬ್ಯಾಂಕ್ ನಿರ್ದೇಶಕ ಪಿ.ಕೆ.ರಾಯನಗೌಡ್ರ ತಿಳಿಸಿದರು.
ನಗರದ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಕಸ್ಕಾರ್ಡ್) ಬ್ಯಾಂಕ್ನ ಗದಗ ಶಾಖಾ ಕಛೇರಿ ಆವರಣದಲ್ಲಿ ಜೂ.22 ರಂದು ನಡೆದ ಅಭಿವೃದ್ಧಿ ಕ್ರೀಯಾ ಯೋಜನೆ ಮತ್ತು ಜಿಲ್ಲಾ ಸಲಹಾ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ 378 ರೈತ ಸಾಲಗಾರರು 2.78 ಕೋಟಿ ರೂ.ಗಳ ಅಸಲನ್ನು ಪಾವತಿಸಿದ್ದು, 1.62 ಕೋಟಿ ರೂ.ಗಳ ಬಡ್ಡಿ ಮನ್ನಾ ಸೌಲಭ್ಯ ಪಡೆದಿದ್ದಾರೆ. ಅದರಂತೆ ಜಿಲ್ಲೆಯ ಪಿಕಾರ್ಡ್ ಬ್ಯಾಂಕ್ನ ಒಟ್ಟು 1,677 ರೈತಸಾಲಗಾರರಿಂದ ಒಟ್ಟು 9.05 ಕೋಟಿ ರೂ.ಗಳ ಸುಸ್ತಿ ಸಾಲದ ಅಸಲು ಪಾವತಿಸಿದರೆ, ಒಟ್ಟು 4.95 ಕೋಟಿ ರೂ.ಗಳ ಬಡ್ಡಿ ಮನ್ನಾ ಸೌಲಭ್ಯ ಗದಗ ಜಿಲ್ಲೆಯ ರೈತರಿಗೆ ದೊರೆಯಲಿದೆ. ಇನ್ನುಳಿದ ಪಿಕಾರ್ಡ್ ಬ್ಯಾಂಕುಗಳ ಒಟ್ಟು 1,299 ಸುಸ್ತಿ ಸಾಲಗಾರರಿಗೆ ಜೂ.30ರವರೆಗೆ ತಮ್ಮ ಸುಸ್ತಿ ಸಾಲದ ಅಸಲು ಪಾವತಿಸಲು ಅವಕಾಶ ನೀಡಲಾಗಿದೆ. ರೈತರು ನಿಗದಿತ ಸಮಯದೊಳಗೆ ಅಸಲು ಪಾವತಿಸಿ ಬಡ್ಡಿ ಮನ್ನಾ ಯೋಜನೆಯ ಸದುಪಯೋಗ ಪಡೆಯಬೇಕೆಂದು ಪಿ.ಕೆ.ರಾಯನಗೌಡ್ರ ಸೂಚಿಸಿದರು.
ಸಭೆಯಲ್ಲಿ ವಿವಿಧ ತಾಲ್ಲೂಕುಗಳ ಪಿಕಾರ್ಡ್ ಬ್ಯಾಂಕ ಅಧ್ಯಕ್ಷರಾದ ಜಿ.ವ್ಹಿ. ಬಳಗಾನೂರ, ಬಿ.ವ್ಹಿ. ಪಾಟೀಲ, ಎಮ್.ಎಸ್. ಪಾಟೀಲ, ಎ.ಆರ್. ಮಲ್ಲನಗೌಡ್ರ , ಎಚ್.ಆರ್. ಕಬ್ಬೇರಳ್ಳಿ , ಪಿಕಾರ್ಡ್/ಕಸ್ಕಾರ್ಡ್ ಬ್ಯಾಂಕ್ ಸಿಬ್ಬಂದಿಗಳು ಹಾಜರಿದ್ದರು.