ಬಾಗಲಕೋಟೆ: ಕ್ಷೇತ್ರದ ಶಾಸಕ ಡಾ:ವೀರಣ್ಣ ಚರಂತಿಮಠ ತಾಲ್ಲೂಕಿನ ಬೇವೂರು ಹಾಗೂ ಬೆನಕಟ್ಟಿ ಗ್ರಾಮಗಳಲ್ಲಿ ಸೋಮವಾರ 10 ಕೋಟಿ, 17 ಲಕ್ಷ ರೂ.ಗಳ ವೆಚ್ಚದ ರಸ್ತೆ ಅಭಿವೃದ್ಧಿ ಹಾಗೂ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ಗಳಿಗೆ ಚಾಲನೆ ನೀಡಿದರು.
ಬೆನಕಟ್ಟಿ ಗ್ರಾಮದಲ್ಲಿ ಬೆನಕಟ್ಟಿ- ಶಿರೂರ ನಡುವಿನ ಜಿಲ್ಲಾ ಮುಖ್ಯ ರಸ್ತೆಯ 6 ಕಿ.ಮೀ ರಸ್ತೆ ಸುಧಾರಣೆ, ಡಾಂಬರೀಕರಣದ 5 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನರೆವೇರಿಸಿದರು.
ಬೇವೂರಿನಲ್ಲಿ ಬೂದಿಹಾಳ ಬೋಡನಾಯಕದಿನ್ನಿ ಕ್ರಾಸ್ ವರೆಗಿನ ಜಿಲ್ಲಾ ಮುಖ್ಯ ರಸ್ತೆಯ 4,75 ಕಿ.ಮೀ ರಸ್ತೆ ಸುಧಾರಣೆ ಕಾಮಗಾರಿ 5 ಕೋಟಿ ರೂ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗುವ 12 ಲಕ್ಷ ರೂ.ಗಳ ವೆಚ್ಚದ ಬಾಬು ಜಗಜೀವನ ರಾಮ್ ಸಮುದಾಯ ಭವನ ಮತ್ತು ಶಾಸಕರ ಅನುದಾನದ 5 ಲಕ್ಷ ರೂ. ಗಳ ವೆಚ್ಚದ ಭರಮಣ್ಣನ ಗುಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಸಿ.ಆರ್.ಪರನಗೌಡ್ರ, ಸದಸ್ಯರುಗಳಾದ ನಿಂಗಪ್ಪ ಮಾಗನೂರ,ರಾಜಶೇಖರ ಅಂಗಡಿ, ಬೆನಕಟ್ಟಿ ಗ್ರಾಪಂ ಅಧ್ಯಕ್ಷ ರೇವಣ್ಣ ಆಲೂರ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುರೇಶ್ ಕೊಣ್ಣೂರ, ಸಂಗಮೇಶ ಹಿತ್ತಲಮನಿ ಹಾಗೂ ಪಿಡಬ್ಲುಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಈಶ್ವರ ಕುರಬಗಟ್ಟಿ, ಎನ್.ಜಿ.ಪಾಟೀಲ, ಗುತ್ತಿಗೆದಾರರಾದ ಸಿ.ಕೆ.ಒಂಟಿಗೋಡಿ,ಎನ್.ಆರ.ಕುಲಕರ್ಣಿ, ಗ್ರಾಪಂ ಕಾರ್ಯದರ್ಶಿ ಆರ್.ವೈ.ಅಪ್ಪನ್ನವರು, ಗ್ರಾಮದ ಬಿಜೆಪಿಯ ನಾಯಕರು ಮತ್ತು ಮುಖಂಡರು ಉಪಸ್ಥಿತರಿದ್ದರು.