ಶ್ರೀನಗರ : ಲಡಾಖ್ ನಲ್ಲಿ ಚೀನಾ ಸಂಘರ್ಷ ನಡೆಸುತ್ತಿದ್ದರೆ, ಇನ್ನೊಂದೆಡೆ ಪಾಕ್ ತನ್ನ ಉಪಟಳ ಮುಂದುವರೆಸಿದೆ. ಗಡಿ ಉಲ್ಲಂಘಿಸಿ ಬಂದ ಪಾಕಿಸ್ತಾನ ಸೇನಾ ಯೋಧರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಇಂದು ಬೆಳಿಗ್ಗೆ ಪಾಕ್ ಸೈನಿಕರು ಗಡಿ ನಿಯಂತ್ರಣ ರೇಖೆಯ ಪೂಂಚ್ ಜಿಲ್ಲೆಯ ರಜೌರಿ ನೌಶೆರಾ ವಲಯದಲ್ಲಿ ಮತ್ತು ಕತೌ ಜಿಲ್ಲೆಯ ಐಬಿ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ದಾಳಿ ನಡೆಸಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಹತ್ತಿರ ನೌಶೆರಾ ವಲಯದ ಪ್ರದೇಶದಲ್ಲಿ ಕಾವಲು ಕಾಯುತ್ತಿದ್ದ ಸೇನಾ ಯೋಧ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡರು. ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಮಧ್ಯೆಯೇ ಮೃತಪಟ್ಟಿದ್ದಾರೆ.