ದೆಹಲಿ: ಚೀನಾ, ನೇಪಾಳ ಗಡಿಯಲ್ಲಿ ಸಂಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ #MaunModiMissing ಟ್ರೆಂಡಿಂಗ್ ಆಗಿದೆ. ಇದರೊಂದಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ನಡೆಸಿರುವ ಸುದ್ದಿ ಗೋಷ್ಠಿಯ ವಿಡಿಯೋವನ್ನು ಕೆಲವರು ಹಂಚಿಕೊಂಡಿದ್ದಾರೆ.
1971ರ ಬಾಂಗ್ಲಾ ಮತ್ತು ಪಾಕಿಸ್ತಾನ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿದ ಒತ್ತಡದ ನಡುವೆ ಕೂಡ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ತಲೆಬಾಗಲಿಲ್ಲ ಎಂದು ವಿಡಿಯೋವನ್ನು ಹಂಚಿಕೊಂಡವರು ಬರೆದುಕೊಂಡಿದ್ದಾರೆ.
ಈ ಮೂಲಕ ಅಧಿಕಾರಕ್ಕೆ ಬಂದು ಆರು ವರ್ಷಗಳಾದರೂ, ನೆರೆಹೊರೆಯ ರಾಷ್ಟ್ರಗಳು ದೇಶದ ಮೇಲೆ ಕಾಲು ಕೆರೆಯುತ್ತಿರುವಾಗಲು ಪ್ರಧಾನಿ ನರೇಂದ್ರ ಮೋದಿಯವರು ಮೌನವಾಗಿದ್ದಾರೆ. ಅವರು ಮಾತಾಡಬೇಕು ಎಂದು ಪರೋಕ್ಷವಾಗಿ ಒತ್ತಾಯಿಸಿದ್ದಾರೆ.
ವಾಸ್ತವದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದುವರೆಗೆ ಒಂದೇ ಒಂದು ಸುದ್ದಿ ಗೋಷ್ಠಿಯನ್ನು ನಡೆಸಿಲ್ಲ. ಅವರು ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ವಾಹಿನಿಯಾದ ದೂರದರ್ಶನದಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದು, ಆಲ್ ಇಂಡಿಯಾ ರೇಡಿಯೋದಲ್ಲಿ ಮನ್ ಕಿ ಬಾತ್ ಆಡುವುದು, ಆಯ್ದ ಕೆಲವು ಸುದ್ದಿ ವಾಹಿನಿಗಳಿಗೆ ಸಂದರ್ಶನಕ್ಕೆ ಸಿಕ್ಕಿದ್ದಾರೆ. ಆದರೆ, ಇಷ್ಟು ದಿನಗಳ ಅವರ ಅಧಿಕಾರದ ಅವಧಿಯಲ್ಲಿ ಒಮ್ಮೆಯೂ ಪತ್ರಕರ್ತರೊಂದಿಗೆ ಸುದ್ದಿ ಗೋಷ್ಠಿ ನಡೆಸಿಲ್ಲ.
ದೇಶ ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ಕೂಡ ಪ್ರಧಾನಿ ಮೋದಿ, ದೂರದರ್ಶನದಲ್ಲಿ ಜನರಿಗೆ ಲಾಕ್ ಡೌನ್ ವಿಷಯ ತಿಳಿಸಿದರು. ನಂತರ ಕೊರೊನಾ ಯೋಧರಿಗೆ ನಮನ ಸಲ್ಲಿಸಲು ದೀಪ ಹಚ್ಚಿ, ದೀಪ ಆರಿಸಿ ಎಂದು ಕರೆನೀಡಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಭೂತಪೂರ್ವವಾಗಿ ಗೆಲ್ಲಿಸಿದ ನಂತರ ಅವರು ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದರು. ಆಗ ಎಲ್ಲರೂ ತೀವ್ರವಾಗಿ ಕುತೂಹಲದಿಂದ ಕಾಯುತ್ತಿದ್ದರು. ಆದರೆ, ಅಂದು ಅವರು ನಾನು ಮಾತಾಡುವುದಿಲ್ಲ. ನಮ್ಮದು ಶಿಸ್ತಿನ ಪಕ್ಷ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮಾತಾಡುತ್ತಾರೆ ಎಂಬರ್ಥದ ಮಾತುಗಳನ್ನು ಹೇಳಿ, ಮೈಕ್ ಅನ್ನು ಪಕ್ಕಕ್ಕೆ ಸರಿಸಿದ್ದರು.