ಬೆಳಗಾವಿ: ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋದವರು ಸಚಿವ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಮಾಡಲು ಯತ್ನಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು ದಿನದಿಂದ ದಿನಕ್ಕೆ ಬಿಜೆಪಿಯಲ್ಲಿ ಬಂಡಾಯದ ಬೇಗುದಿ ಹೆಚ್ಚಾಗುತ್ತಿದೆ. ಸರ್ಕಾರದಲ್ಲಿ ವಲಸಿಗರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂಲ ಬಿಜೆಪಿ ಶಾಸಕರು ಅಸಮಾಧನಗೊಂಡಿದ್ದಾರೆ. ಇದು ಬಿಜೆಪಿ ಆಂತರಿಕ ವಿಚಾರವಾಗಿದ್ದು ಎಲ್ಲಿಗೆ ಹೋಗಿ ನಿಲ್ಲಲಿದೆ ಎಂದು ಕಾದು ನೋಡಬೇಕು ಎಂದರು.
ಬಿಜೆಪಿಯಲ್ಲಿ ಮೂರು ಬಣ
ಬಿಜೆಪಿ ಪಕ್ಷದಲ್ಲಿ ಒಟ್ಟು ಮೂರು ಬಣಗಳು ಇವೆ. ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗಿರುವವರ ಒಂದು ಗುಂಪು. ಸಂಘ ಪರಿವಾರದಿಂದ ಬಂದಿರುವ ಬಿಜೆಪಿ ಶಾಸಕರದ್ದು ಮತ್ತೊಂದು ಗುಂಪು, ಹಾಗೂ ಜನತಾ ಪರಿವಾರದಿಂದ ಬಿಜೆಪಿಗೆ ಹೋಗಿರುವ ಶಾಸಕರ ಇನ್ನೊಂದು ಗುಂಪು ಇದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ಇನ್ನೂ 5 ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡಿತ್ತೇನೆ ಎಂದ ಹೇಳಿಕೆಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ನಿಂದ ಯಾರೊಬ್ಬರೂ ಬಿಜೆಪಿಗೆ ಹೋಗಲ್ಲ. ಈಗ ಎಲ್ಲ ಸಚಿವ ಸ್ಥಾನಗಳು ಭರ್ತಿಯಾಗಿದ್ದು, ಬಂದವರಿಗೆ ಏನ್ ಕೊಡ್ತಾರೆ? ಕೇವಲ ಶಾಸಕರಾಗಿ ಉಳಿಯೋಕೆ ಬಿಜೆಪಿಗೆ ಏಕೆ ಹೋಗಬೇಕು ಎಂದು ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ನಿಂದ ಯಾವುದೇ ಆಪರೇಷನ್ ನಡೆಸಲ್ಲ. ದುಡ್ಡು ಕೊಟ್ಟು ಶಾಸಕರನ್ನು ಖರೀದಿ ಮಾಡುವಷ್ಟು ಬ್ಯಾಂಕ್ ಬ್ಯಾಲೆನ್ಸ್ ನಮ್ಮ ಬಳಿ ಇಲ್ಲ ಎಂದು ವ್ಯಂಗ್ಯ ಮಾಡಿದರು.