ಬೆಂಗಳೂರು: ಇತ್ತಿಚೆಗಷ್ಟೆ ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆಗೆ ಕಳಿಸಬೇಕು ಎಂದು ಶತಾಯಗತಾಯ ಪ್ರಯತ್ನಿಸಿದ್ದರು. ಅದಕ್ಕೆ ಪೂರಕವಾಗಿ ಕತ್ತಿ ಮನೆಯಲ್ಲಿ ನಡೆದ ಡಿನ್ನರ್ ಪಾಲಿಟಿಕ್ಸ್ ಬಿಜೆಪಿಯಲ್ಲಿ ತಣ್ಣಗೆ ಭಿನ್ನಮತದ ತಂಗಾಳಿ ಸೂಸಿತ್ತು. ಶೀಕರಣೆ ರಾಜಕಾರಣ ಏನು ಮಾಡುತ್ತೋ ಅಂತ ರಾಜ್ಯದ ಜನ ಕುತೂಹಲದಿಂದಿರುವಾಗಲೇ ಸಿಎಂ ಬಿ.ಎಸ್.ಯಡಿಯೂರಪ್ಪ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಕೊಟ್ಟು ಕತ್ತಿ ವರಸೆಗೆ ಪ್ರತ್ಯುತ್ತರ ನೀಡಿದ್ದರು. ಇದರಿಂದ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಬಿಎಸ್ವೈ ಮತ್ತೆ ಪ್ರಭಲ ಎಂದು ಬಿಂಬಿಸಲಾಯಿತು. ಆದರೆ ಈಗ ರಾಜ್ಯಸಭಾ ಚುನಾವಣೆಯಲ್ಲಿ ಮಾತ್ರ ಬಿಎಸ್ವೈಗೆ ಮುಖಭಂಗವಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಿಜೆಪಿಯಲ್ಲಿ ಸಂಘ ಹಾಗೂ ಪಕ್ಷನಿಷ್ಠರಿಗೆ ಬೆಲೆ ಇದೆ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ.
ಹೊಡೆತ ಒಂದು ಹಕ್ಕಿ ಮೂರು..!
ಈಗಾಗಲೇ ರಾಜ್ಯಸಭೆಗೆ ರಮೇಶ್ ಕತ್ತಿ ಭಾರಿ ಕಸರತ್ತು ನಡೆಸಿದ್ದರು. ಕಳೆದ ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಪ್ರಭಾಕರ ಕೋರೆ ಕೂಡ ಅಂತಿಮ ಕ್ಷಣದವರೆಗೂ ಲಾಭಿ ನಡೆಸಿದ್ದರು. ಆದರೆ ಅಂತಿಮವಾಗಿ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಆಕಾಂಕ್ಷಿಗಳಿಗೆ ಶಾಕ್ ನೀಡಿದೆ. ಬೆಳಗಾವಿ ಜಿಲ್ಲೆ ಬಿಜೆಪಿಯಲ್ಲಿ ಜಾರಕಿಹೊಳಿ-ಕತ್ತಿ ಎರಡು ಬಣಗಳಾಗಿವೆ. ಹೀಗಾಗಿ ಬಣ ರಾಜಕಾರಣ ಕೂಡ ಪಕ್ಷದ ಏಳಿಗೆ ದೃಷ್ಟಿಯಿಂದ ಒಳಿತಲ್ಲ ಎನ್ನುವುದು ಹೈಕಮಾಂಡ್ ವಿಚಾರ. ಮುಖ್ಯವಾಗಿ ಈಗಾಗಲೇ ಕತ್ತಿ ಅಧಿಕಾರಕ್ಕಾಗಿ ಭಿನ್ನಮತ ತೋರಿಸಿ ಹೈಕಮಾಂಡ್ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಇನ್ನು ಮುಖ್ಯವಾಗಿ ರಮೇಶ್ ಜಾರಕಿಹೊಳಿ ಬಿಎಸ್ವೈ ನಿಷ್ಠರು ಮಾತ್ರ. ಆದರೆ ಇವರಿಗೆ ಸಂಘದ ಹಿನ್ನೆಲೆ ಇಲ್ಲದೇ ಇರುವುದರಿಂದ ಅರಭಾವಿ ಕ್ಷೇತ್ರದಲ್ಲಿ ಸಂಘ ನಿಷ್ಠರೊಬ್ಬರಿಗೆ ಬೆಳೆಸಲೇಬೇಕು ಎನ್ನುವ ಉದ್ದೇಶ ಬಿಜೆಪಿಗಿದೆ. ಹೀಗಾಗಿ ಈರಣ್ಣ ಕಡಾಡಿ ಅವರನ್ನು ಆಯ್ಕೆ ಮಾಡುವ ಮೂಲಕ ಜಾರಕಿಹೊಳಿ-ಕತ್ತಿ ಇಬ್ಬರಿಗೂ ಹೈಕಮಾಂಡ್ ಎಚ್ಚರಿಕೆ ನೀಡಿದೆ. ಇನ್ನು ಈಗಾಲೇ ರಾಜ್ಯಸಭಾ ಸ್ಥಾನ ಭ್ರದ್ರಪಡಿಸಿಕೊಂಡಿದ್ದ ಪ್ರಭಾಕರ ಕೋರೆ ಕೂಡ ಅವಕಾಶ ವಂಚಿತರಾಗಿದ್ದು ಒಂದೇ ಏಟಿಗೆ ಮೂರು ಹಕ್ಕಿ ಉರುಳಿಸಿದಂತಾಗಿದೆ.
ಬಿಜೆಪಿಯಲ್ಲಿ ಬಂಡಾಯಕ್ಕೆ ಬೆಲೆ ಇಲ್ಲ
ಅಧಿಕಾರಕ್ಕಾಗಿ ಬಂಡಾಯ ಅಥವಾ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಿದರೆ ಬಿಜೆಪಿಯಲ್ಲಿ ನಡೆಯುವುದಿಲ್ಲ. ಪ್ರಾಮಾಣಿಕವಾಗಿ ಪಕ್ಷ ನಿಷ್ಟರಾದವರಿಗೆ ಮಾತ್ರ ಇಲ್ಲಿ ಅವಕಾಶ ಎಂಬುದು ಸಾಬೀತು ಮಾಡಿದೆ. ಹೀಗಾಗಿ ಈರಣ್ಣ ಕಡಾಡಿ, ಅಶೋಕ್ ಗಸ್ತಿ ಅವರು ಪಕ್ಷದಲ್ಲಿ ಅಷ್ಟೊಂದು ಜನಪ್ರೀಯತೆಯನ್ನು ಪಡೆಯದಿದ್ದರೂ ಪಕ್ಷ ಹಾಗೂ ಸಂಘ ನಿಷ್ಟರು ಎನ್ನುವ ಕಾರಣಕ್ಕೆ ಬಿಜೆಪಿ ಟೀಕೆಟ್ ಲಭಿಸಿದೆ. ಇದರಿಂದಾಗಿ ನಿಷ್ಟರಿಗೆ ಬಿಜೆಪಿಯಲ್ಲಿ ಬೆಲೆ ಇದೆ ಎನ್ನುವ ಸಂದೇಶ ಬಿಜೆಪಿ ಸಾರಿದೆ.
ಕಡಾಡಿ-ಗಸ್ತಿ ಯಾರು..?
ಸವಿತಾ ಸಮಾಜದ ಮುಖಂಡರಾದ ಅಶೋಕ ಗಸ್ತಿ ಮೂಲತ: ರಾಯಚೂರು ಜಿಲ್ಲೆಯವರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಎಬಿವಿಪಿ ಯಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟವರು. ಮುಖ್ಯವಾಗಿ ಆರ್.ಎಸ್.ಎಸ್ ಕಟ್ಟಾಳು. ಇನ್ನು ಈರಣ್ಣ ಕಡಾಡಿ, 1989 ರಿಂದಲೇ ಬೆಳಗಾವಿ ಜಿಲ್ಲೆಯ ಬಿಜೆಪಿಯಲ್ಲಿ ಸಕ್ರೀಯ ಕಾರ್ಯಕರ್ತರು. ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 1994 ರಲ್ಲಿ ಅರಭಾವಿ ಬಿಜೆಪಿ ಅಬ್ಯರ್ಥಿಯಾಗಿ ಸೋಲನುಭವಿಸಿದ್ದರು. 2004 ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಅಧ್ಯಕ್ಷರಾಗಿದ್ದರು. 2010 ರಲ್ಲಿ ಬೆಳಗಾವಿ ಜಿಪಂ ಅಧ್ಯಕ್ಷರು ಕೂಡ ಆಗಿದ್ದರು. ಈಗ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಕಾಂಕ್ಷಿಗಳಿಗೆ ಅಸಂತೋಷ..!
ಬಿಜೆಪಿಯಲ್ಲಿ ಬಿಎಸ್ವೈ ಗಿಂತ ಬಿ.ಎಲ್.ಸಂತೋಷ್ ಅವರೇ ಪ್ರಭಾವಿ ಎನ್ನುವುದು ರಾಜ್ಯಸಭೆಯ ಅಭ್ಯರ್ಥಿಗಳ ಆಯ್ಕೆ ಮೂಲಕ ಮತ್ತೊಮ್ಮೆ ಗೊತ್ತಾಗಿದೆ. ಸಂತೋಷ್ ಅವರ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನೆ ರಾಜ್ಯಸಭೆಗೆ ಹೈಕಮಾಂಡ್ ಆಯ್ಕೆ ಮಾಡಿದೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ ಅವರು ರಾಜ್ಯ ಬಿಜೆಪಿಯಲ್ಲಿ ಸಂಪೂರ್ಣ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಸಂಘ ಹಾಗೂ ಪಕ್ಷ ನಿಷ್ಟರಿಗೆ ಅವಕಾಶ ನೀಡುವ ಮೂಲಕ ಹಿಡಿತ ಸಾಧನೆಯ ಯತ್ನ ನಡೆಸಿದ್ದಾರೆ ಎನ್ನುವುದು ಈಗ ಸಾಬೀತು ಮಾಡಿದ್ದಾರೆ. ರಾಜ್ಯಸಭಾ ರಾಜಕಾರಣ ರಾಜ್ಯ ಬಿಜೆಪಿಯಲ್ಲಿ ಯಾವ ಬದಲಾವಣೆಗೆ ಕಾರಣವಾಗುತ್ತೆ ಎನ್ನುವುದು ಕಾದು ನೋಡಬೇಕಿದೆ.