ಚಿತ್ರದುರ್ಗ: ಕೋರೋನಾ ಲಾಕ್ ಡೌನ್ ನಡುವೆಯೇ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರೇ ಲಾಕ್ ಡೌನ್ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ತಾವು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ನೂರಾರು ಜನರು ಸೇರಿ ಸಚಿವ ಶ್ರೀರಾಮುಲು ಅವರಿಗೆ ಹೂಮಳೆ ಗೈದಿದ್ದಾರೆ.
ಪರುಶುರಾಂಪುರದಲ್ಲಿ ಸಚಿವ ಶ್ರೀರಾಮುಲುಗೆ ಎತ್ತಿನ ಗಾಡಿಲ್ಲಿ ಗ್ರಾಮಸ್ಥರು ಮೆರವಣಿಗೆ ಮಾಡಿದರು.ಮೆರವಣಿಗೆಯಲ್ಲಿ ಸಚಿವರಿಗೆ ಬೃಹತ್ ಸೇಬಿನ ಹಾರ ಹಾಕಿ ಗ್ರಾಮಸ್ಥರು ಸ್ವಾಗತ ಕೋರಿದರು.ಬೃಹತ್ ಸೇಬಿನ ಹಾರದ ಜೊತೆ ಸಚಿವರಿಗೆ ಅಭಿಮಾನಿಗಳು ಹೂ ಮಳೆಗರೆದರು. ಸಚಿವರ ಮೆರವಣಿಗೆಯಲ್ಲಿ ಸಂಸದ ಎ.ನಾರಾಯಣ ಸ್ವಾಮಿ, ಜಿ.ಹೆಚ್.ತಿಪ್ಪಾರೆಡ್ಡಿ ಭಾಗಿಯಾಗಿದ್ದರು. ಮೆರವಣಿಗೆ ಮಾರ್ಗದ ಉದ್ದಕ್ಕೂ ಸಚಿವರಿಗೆ ರಾಶಿ ರಾಶಿ ಹೂ ತೂರಿ ಜನರು ಸಂಭ್ರಮಿಸಿದರು.
ಇಲ್ಲಿನ ವೇಧಾವತಿ ನದಿಗೆ ಬಾಗಿನ ಅರ್ಪಿಸಲು ಸಚಿವ ಶ್ರೀರಾಮುಲು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀರಾಮುಲು ಅವರನ್ನು ಸ್ವಾಗತಿಸುವ ಭರದಲ್ಲಿ ಜನರು ಸಾಮಾಜಿಕ ಅಂತರವನ್ನೆ ಮರೆತಿದ್ದರು. ಮುಖ್ಯವಾಗಿ ನಿತ್ಯ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಹಾಗೂ ಆರೋಗ್ಯದ ಬಗ್ಗೆ ಪಾಠ ಮಾಡಬೇಕಾದ ಖಾತೆಯ ಮಂತ್ರಿಗಳೇ ಇಂದು ಸಾಮಾಜಿಕ ಅಂತರ ಮರೆತಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.
ಸಚಿವರು, ಸುತ್ತಲೂ ನೂರಾರು ಜನ ಜಮಾವಣೆಗೊಂಡಿದ್ದರು. ಜೊತೆಗೆ ಮೆರವಣಿಗೆ ವೇಳೆ ಎತ್ತಿನಗಾಡಿ ಸುತ್ತ ಬೃಹತ್ ಜನ ಸ್ಥೋಮ ಸೇರಿತ್ತು.
ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಲಾಕ್ ಡೌನ್ ಉಲ್ಲಂಘಸಿದರೆ ಕಾನೂನು ಕ್ರಮದ ಬಗ್ಗೆ ಸರ್ಕಾರ ಹೇಳುತ್ತದೆ. ಆದರೆ ಸರ್ಕಾರದ ಪ್ರತಿನಿಧಿಯೇ ಕಾನೂನು ನಿಯಮ ಉಲ್ಲಂಘಿಸಿದರೆ ಹೇಗೆ? ಇಷ್ಟೆಲ್ಲ ನಡೆಯುತ್ತಿದ್ದರೂ ಜಿಲ್ಲಾಡಳಿತ ಏನು ಮಾಡುತ್ತಿತ್ತು. ಜನಸಾಮಾನ್ಯರಿಗೆ ಒಂದು ನ್ಯಾಯ. ಅಧಿಕಾರಿಶಾಹಿಗಳಿಗೊಂದುನ್ಯಾಯಾನಾ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.