ಹಾವೇರಿ: ಜಮೀನು ವಿವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾವೆರಿ ಜಿಲ್ಲೆಯಲ್ಲಿ ನಡೆದಿದೆ. ಮರಿಯಪ್ಪ ಭೂಮಣ್ಣವರ ಕೊಲೆಯಾದ ವ್ಯಕ್ತಿ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ರಾಮಪ್ಪ ನಾಗಪ್ಪ ಭೂಮಳ್ಳೇರ ಎಂಬುವವನಿಂದ ಕೃತ್ಯ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ. ಜಮೀನು ಒತ್ತುವರಿಯಾಗಿದೆ ಎಂದು ಪಕ್ಕದ ಹೊಲದ ಮಾಲೀಕ ರಾಮಪ್ಪ ಭೂಮಳ್ಳೆರ ಖ್ಯಾತೆ ತೆಗೆದಿದ್ದನೆನ್ನಲಾಗಿದೆ. ಸಂಗಡಿಗರೊಂದಿಗೆ ಸೇರಿ ಮರಿಯಪ್ಪನಿಗೆ ಥಳಿಸಿ ಜಮೀನಿಗೆ ಉಪಯೋಗಿಸುವ ಕೀಟನಾಶಕ ಕುಡಿಸಿ ಕೊಲೆಗೆ ಯತ್ನಿಸಿದ್ದಾರೆ. ಅಸ್ವಸ್ಥನಾಗಿದ್ದ ಮರಿಯಪ್ಪನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮರಿಯಪ್ಪ ಮೃತಪಟ್ಟಿದ್ದಾರೆ. ಮರಿಯಪ್ಪನ ಕೊಲೆಗಾರರನ್ನು ಕೂಡಲೇ ಬಂಧಿಸುವಂತೆ ಕುಟುಂಬಸ್ಥರ ಆಗ್ರಹಿಸಿದ್ದಾರೆ. ಕೊಲೆಗಾರರನ್ನು ಬಂಧಿಸುವರೆಗೂ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬಸ್ಥರ ಪಟ್ಟು ಹಿಡಿದರು. ಮೃತದೇಹವನ್ನು ಮನೆಯಲ್ಲಿಟ್ಟು ಕುಟುಂಬಸ್ಥರು ಧರಣಿ ಮಾಡಿದರು. ಈ ಕುರಿತಂತೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.