ಚಿಕ್ಕಬಳ್ಳಾಪುರ: ಕೋವಿಡ್ ರೋಗಕ್ಕೆ ಲಸಿಕೆ ಸಿಗುವತನಕ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಜನರು ಚಾಚೂ ತಪ್ಪದೆ ತಮ್ಮಬದುಕಿನ ಭಾಗವಾಗಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಲಾಕ್ಡೌನ್ ಸಡಿಲಿಕೆ ಬಳಿಕ ಕೊರೋನಾ ಸೋಕಿತರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ನೆರೆಯ ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿರುವ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ರಾಜ್ಯಕ್ಕೆ ಹಿಂದಕ್ಕೆ ಬರುತ್ತಿರುವುದು ಕಾರಣ. ನಮ್ಮವರನ್ನು ರಾಜ್ಯಕ್ಕೆ ಮರಳಿ ಬರಬೇಡಿ ಎಂದು ಅಮಾನವೀಯವಾಗಿ ನಡೆದುಕೊಳ್ಳಲು ಆಗುವುದಿಲ್ಲ. ಆದರೆ ಬರುವ ಎಲ್ಲರನ್ನೂ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಿ, ಕ್ವಾರಂಟೈನ್ನೂಲ್ಲಿ ಇಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಲಾಕ್ಡೌದನ್ ಸಡಿಲಕೆ ಬಳಿಕ ಜನರು ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಸರ್ಕಾರ ನೀಡುವ ಸೂಚನೆಗಳನ್ನು ಪಾಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಸನ್ನಿವೇಶದಲ್ಲಿ ಜನರ ಸಂಕಷ್ಟ ಪರಿಹಾರಕ್ಕೆ ಏನೆಲ್ಲಾ ನೆರವು ನೀಡಬೇಕೊ ಅದೆಲ್ಲವನ್ನೂ ನೀಡಿ ಕ್ರಮ ಜರುಗಿಸಿವೆ. ಇನ್ನು ಮುಂದೆ ಜನರ ಸಹಕಾರ ಅತೀ ಮುಖ್ಯ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ರೋಗಕ್ಕೆ ಲಸಿಕೆ ಲಭ್ಯ ಆಗುವತನಕ ಸಾಮಾಜಿಕ ಮತ್ತು ಭೌತಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಆಗಿಂದಾಗ್ಗೆ ಸಾಬೂನಿನಿಂದ ಕೈತೊಳೆದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು, ಜನದಟ್ಟಣೆ ಕಾರ್ಯಕ್ರಮಗಳನ್ನು ರದ್ದು ಮಾಡಿ, ಹೊರಗೆ ತಿರುಗುವುದು, ಪ್ರವಾಸ ಕೈಬಿಡಬೇಕು. ಹಿರಿಯ ನಾಗರೀಕರು ಮತ್ತು ಮಕ್ಕಳನ್ನು ಇನ್ನೂ ಕೆಲ ತಿಂಗಳು ಮನೆಯಿಂದ ಹೊರಗೆ ಕಳುಹಿಸಬಾರದು. ಇದರೆ ಜತೆಗೆ ಆಗಿಂದಾಗ್ಗೆ ಸರ್ಕಾರ ನೀಡುವ ಸೂಚನೆಗಳನ್ನು ಅನುಸರಿಸಬೇಕು. ಇದು ನಮ್ಮ ಸಂಸ್ಕೃತಿಯ ಭಾಗ ಎಂಬಂತೆ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೊರೋನಾ ಸೋಂಕು ತಗುಲಿರುವ ಶೇಕಡಾ 95ಕ್ಕೂ ಹೆಚ್ಚು ಮಂದಿಯಲ್ಲಿ ರೋಗದ ಲಕ್ಷಣ ಕಾಣಿಸುತ್ತಿಲ್ಲ. ಕೇವಲ ಶೇಕಡಾ 5 ರಿಂದ 6 ಮಂದಿಗೆ ಮಾತ್ರ ನಾವು ಚಿಕಿತ್ಸೆ ನೀಡುತ್ತಿದ್ದೇವೆ. ಉಳಿದವರು ತಾವಾಗೇ ಗುಣಮುಖರಾಗುತ್ತಿದ್ದಾರೆ. ಅದರಲ್ಲೂ ಶೇಕಡಾ 2 ರಿಂದ 3 ರಷ್ಟು ಮಂದಿಗೆ ಮಾತ್ರ ಪರಿಸ್ಥಿತಿ ಗಂಭೀರ ರೂಪ ಪಡೆಯುತ್ತಿದೆ. ಇದಕ್ಕೆ ಅವರಲ್ಲಿರುವ ಬೇರೆ ಗಂಭೀರ ಕಾಯಿಲೆಗಳು ಕಾರಣವಾಗಿವೆ. ದೇಶದಲ್ಲಿ ಮರಣ ಹೊಂದುತ್ತಿರುವ ಪ್ರಮಾಣ ಕೂಡ ಶೇಕಡಾ 4 ರಷ್ಟಿದೆ ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿಯೇ ನಮ್ಮ ರಾಜ್ಯ ಉತ್ತಮ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ವಿಶ್ವದರ್ಜೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ತಜ್ಞರ ಸಲಹೆ ಆಧರಿಸಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸಾ ಪದ್ಧತಿ ಅಳವಡಿಕೊಳ್ಳಲಾಗಿದೆ. ಈ ಕಾರಣಗಳಿಂದಲೇ ಹೆಚ್ಚಿನ ಸಂಖ್ಯೆ ಕೊರೋನಾ ಸೋಂಕಿತರು ಗುಣಮುಖರಾಗಿ ಮನೆಗೆ ಹಿಂತಿರುಗುತ್ತಿದ್ದಾರೆ. ಹೀಗಾಗಿ ಯಾರೂ ಕೂಡ ಆತಂಕ, ಭಯಪಡುವ ಅಗತ್ಯವಿಲ್ಲ. ಸರ್ಕಾರ ನೀಡುವ ಸೂಚನೆಗಳನ್ನು ಪಾಲಿಸಿಕೊಂಡು ಸಹಕರಿಸಬೇಕಿದೆ ಎಂದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ, “ರಾಜ್ಯದ ಗಡಿಯಲ್ಲಿ ನಮ್ಮವರೇ ಒಳಗೆ ಬರಲು ಎರಡು ಮೂರು ದಿನಗಳ ಕಾಲ ಪರದಾಟ ನಡೆಸಿ, ಮಹಿಳೆಯರು ಮಕ್ಕಳು ಪರದಾಟ ನಡೆಸಿದ್ದನ್ನು ಗಮನಿಸಿ ಮತ್ತು ಸ್ಥಳೀಯ ಶಾಸಕರು ಮತ್ತು ಚುನಾಯಿತ ಪ್ರತಿನಿಧಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕರೆದುಕೊಳ್ಳಲಾಗಿದೆ. ಆದರೆ ಎಲ್ಲರನ್ನೂ ತಪಾಸಣೆ ನಡೆಸಿ, ಕ್ವಾರಂಟೈನ್ನುಲ್ಲಿ ಇರಿಸಲಾಗಿದೆ. ಸದ್ಯ ಹೆಚ್ಚಿನ ಸೋಂಕಿತರು ಇರುವ ತಮಿಳುನಾಡು ಮತ್ತು ಮಹಾರಾಷ್ಟ್ರಗಳಿಂದ ಬರುವವರಿಗೆ ಪ್ರವೇಶ ನಿರ್ಬಂದಿಸಲಾಗಿದೆ ಎಂದರು.