ಚಿತ್ರದುರ್ಗ: ಅಹಮದಾಬಾದ್ ನಿಂದ ಬಂದು ಚಿತ್ರದುರ್ಗದಲ್ಲಿ ಪತ್ತೆಯಾಗಿದ್ದ ತುಮಕೂರಿನ 17 ಜನ ತಬ್ಲಿಘಿಗಳನ್ನು ಪಾವಗಡದ ವೈ.ಎನ್.ಹೊಸಕೋಟೆಯ ಕುರುಬರಹಳ್ಳಿ ಬಳಿಯ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಪೈಕಿ ಹೊಸಕೋಟೆಯ 13 ಜನರಿದ್ದು, ಇನ್ನುಳಿದ ಐವರು ಆಂಧ್ರದ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕ್ವಾರಂಟೈನ್ ಮಾಡಲು ಅವಕಾಶ ಕೊಡದೆ ಸ್ಥಳೀಯರು ಆರಂಭದಲ್ಲಿ ಗಲಾಟೆ ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆ ನಂತರ ತಹಶಿಲ್ದಾರ್ ವರದರಾಜು ಸೇರಿದಂತೆ ಅಧಿಕಾರಿಗಳಿಂದ ಗ್ರಾಮಸ್ಥರ ಮನವೊಲಿಸಲಾಯಿತು. ಇಂದು ಬೆಳಿಗ್ಗೆ 5ಕ್ಕೆ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಯಿತು.
ಸದ್ಯ ಹಾಸ್ಟೇಲನ್ನು ಸೀಲ್ ಡೌನ್ ಮಾಡಲಾಗಿದೆ. ಪಾವಗಡ ಪಿಎಸ್ಐ ನಾಗರಾಜು, ವೈದ್ಯಾಧಿಕಾರಿ ತಿರುಪತಿ ಸ್ಥಳದಲ್ಲಿ ಸೇವೆ ನೀಡುತ್ತಿದ್ದಾರೆ.