ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕಾವ್ಯ ಕಳುಹಿಸಿದವರು ನಂರುಶಿ ಕುಂಬಾರ ಅವರು, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ಗ್ರಾಮದವರು. ಸದ್ಯ ಬೆಂಗಳುರಿನ ಮೆಟ್ರೋ ಉದ್ಯೋಗಿಯಾಗಿರುವ ನಂರುಶಿ ಅವರು ಗಜಲ್ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕರಾದ ಕೃತಿಗಳು ಈಗಾಗಲೇ ಹೊರತಂದಿದ್ದು, ತಮ್ಮ ಗಜಲ್ ಮೂಲಕ ಕೊರೋನಾ ವೈರಸ್ ನಿಂದಲೇ ಮಾತನಾಡಿಸಿದ್ದಾರೆ.
ಗಜಲ್
ವುಹಾನ್ ನಿಂದ ಹುಟ್ಟಿದ ಅಗೋಚರ ಶಕ್ತಿ ಪಡೆದ ಕೊರೋನಾ ನಾನು
ಅಸುರರ ವರಪುತ್ರನಾಗಿ ಜನಿಸಿ ನಿಮ್ಮಲಿ ಮೆರೆದ ಕೊರೋನಾ ನಾನು
ಊರು ತಿರುಗುವವರನು ಕೈ-ಕಾಲು ಮುರಿದು ಮನೆಯಲಿ ಬಂಧಿ ಮಾಡಿರುವೆ
ಹೊರ ಬಂದವರ ಒಳಹೊಕ್ಕು ನಿಧಾನದಿ ಬರೆ ಎಳೆದ ಕೊರೋನಾ ನಾನು
ಅಹಂಕಾರದಿ ಮೆರೆಯುವವರೆಲ್ಲ ಮುದುಡಿ ಮೂಲೆಯಲಿ ಕುಳಿತಿದ್ದಾರೆ
ಮನದ ಕರೆಗಂಟೆ ನಿಲ್ಲಸಲು ಜವರಾಯನ ಕರೆದ ಕೊರೋನಾ ನಾನು
ಪಟ್ಟಕಟ್ಟಿ ಆಳುವ ರಾಜರ ತಲೆಗಳು ನನ್ನಯ ಕಾಲ ಅಡಿ ಬಿದ್ದಿವೆ
ಅಳಿಯದೇ ದ್ವಿಗುಣಿಯಾಗಿ ನಿಮ್ಮ ಜೀವದಲಿ ನಲಿದ ಕೊರೋನಾ ನಾನು
ನೀವು ಬಂದು ಕರೆಯದೆ ಬರುವವನಲ್ಲ, ಬಂದರೆ ಬೇಗ ಬಿಡುವುದಿಲ್ಲ
ಮನುಜರೆಲ್ಲರು ಮಾಡಿದ ಪ್ರಕೃತಿ ನಾಶಕೆ ಸಿಡಿದ ಕೊರೋನಾ ನಾನು
ಗಂಗೆಯ ಒಡಲು ಓಝೋನ್ ಪದರವ ನನ್ನ ಮರಣದ ನಂತರ ನೋಡಿ
ವಿಶ್ವ ಸಮರದಂತೆ ಸಹಸ್ರ ನರರ ಜೀವ ತೆಗೆದ ಕೊರೋನಾ ನಾನು
ಬಡತನ ಹಸಿವು ಪರಿಚಯಿಸಿರುವೆ ಅದಕೆ ಶಹಬ್ಬಾಸ್ ನೀಡಿರಿ ನನಗೆ
ಕುಟುಂಬದ ಪ್ರೀತಿ ವಾತ್ಸಲ್ಯವ ಜನರಲಿ ಸೆಳೆದ ಕೊರೋನಾ ನಾನು
ಈಗಾದರೂ ಇಟ್ಟಿರುವುದ ಕೊಟ್ಟು ಕೊಟ್ಟಿರುವುದ ಮರೆತು ಜೀವಿಸಿರಿ
ಜೀವಕ್ಕಿಂತ ಹಣ ಹಿರಿದಲ್ಲವೆಂದು ಕಥೆ ಬರೆದ ಕೊರೋನಾ ನಾನು
ಮುಂದೆಯಾದರೂ ಅರಿತು ಬೆರೆತು ಬಾಳಿದರೆ ನಾ ಬಂದಿದ್ದು ಸಾರ್ಥಕ
ನಂರುಶಿ ಬರೆಯುವ ಗಜಲ್ ಗಳಿಗೆ ತಲೆಬಾಗಿ ಮಣಿದ ಕೊರೋನಾ ನಾನು.
ನಂರುಶಿ ಕಡೂರು.