ಗದಗ: ಕೋವಿಡ್ -19 ಹರಡದಂತೆ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದನ್ವಯ ಮುಂದಿನ ಎರಡು ವಾರಗಳವರೆಗೆ ರಾತ್ರಿ 7 ಗಂಟೆಯಿಂದ ಮುಂಜಾನೆ 7 ಗಂಟೆಯವರೆಗೆ ಅನಿವಾರ್ಯ ಕಾರಣ ಹೊರತುಪಡಿಸಿ ಎಲ್ಲ ವ್ಯಕ್ತಿಗಳ ಸಂಚಾರ ನಿಷೇಧಿಸಿದೆ. ಆರೋಗ್ಯ, ಅವಶ್ಯಕ ಪೂರೈಕೆಗಳಂತಹ ಅನಿವಾರ್ಯ ಕಾರಣ ಹೊರತುಪಡಿಸಿ 65 ವರ್ಷದ ಮೇಲ್ಪಟ್ಟವರು , 10 ವರ್ಷದೊಳಗಿನ ಮಕ್ಕಳು, ರೋಗಗ್ರಸ್ಥ ವ್ಯಕ್ತಿಗಳನ್ನು ಹಾಗೂ ಗರ್ಭಿಣಿಯರನ್ನು ಕಡ್ಡಾಯವಾಗಿ ಅವರು ಮನೆಯಲ್ಲಿಯೇ ಇರತಕ್ಕದ್ದು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯಿದೆ 1897, ವಿಪತ್ತು ನಿರ್ವಹಣಾ ಕಾಯದೆ 2005, ಭಾರತೀಯ ದಂಡ ಕ್ರಮ ಜರುಗಿಸಲಾಗುವುದು.
ಜಿಲ್ಲೆಯಾದ್ಯಂತ ಮುಂದುವರೆದ ಪ್ರತಿಬಂಧಕಾಜ್ಞೆ ಪರಿಣಾಮಕಾರಿ ಜಾರಿ ಕುರಿತು ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳೂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಎಲ್ಲ ತಹಶೀಲ್ದಾರರು ಹಾಗೂ ಸಂಬಂಧಿತ ಇಲಾಖಾ ಅಧಿಕಾರಿಗಳು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.