ಮಸ್ಕಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಕಾರ್ಯಕರ್ತರು ಶ್ರಮಿಸಬೇಕೆಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಕರೆ ನೀಡಿದರು. ತಾಲೂಕಿನ ಗುಂಡಾ ಗ್ರಾಪಂ ವ್ಯಾಪ್ತಿಯ ಗುಡಿಹಾಳ ಗ್ರಾಮದಲ್ಲಿ ಬೂತ್ ಮಟ್ಟದ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ದೇಶ ಮೊದಲು, ನಂತರ ಪಕ್ಷ ಎಂಬ ಮೌಲ್ಯಾಧಾರಿತ ರಾಜಕಾರಣ ಮಾಡಲು ಬಿಜೆಪಿಗೆ ಮಾತ್ರ ಸಾಧ್ಯ.

ವಿಷಯಾಧಾರಿತ ಹೋರಾಟಗಳಿಗೆ ನ್ಯಾಯ ಒದಗಿಸುವ ನಾಯಕರು ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿದ್ದಾರೆ. ಜನಸಾಮಾನ್ಯರು, ರೈತರು, ದುಡಿಯುವ ವರ್ಗ, ಮಹಿಳೆಯರು ಎಲ್ಲ ವರ್ಗದ ಜನರು ಬಿಜೆಪಿ ಬಗ್ಗೆ ಆಶಾಭಾವನೆಯನ್ನು ಹೊಂದಿದ್ದಾರೆ. ಭಾರತವನ್ನು ಬಲಿಷ್ಠವಾಗಿಸುವ ಶಕ್ತಿ ಬಿಜೆಪಿ ಪಕ್ಷಕ್ಕೆ ಮಾತ್ರ ಇದೆ. ಜನರ ಒಳಿತಿಗಾಗಿ ಸೂಕ್ಷ್ಮವಾದ ನಿರ್ಣಯಗಳನ್ನು ಕೈಗೊಂಡ ಕೇಂದ್ರ ಸರ್ಕಾರ ಉಜ್ವಲ ಯೋಜನೆ, ಜಲಜೀವನ ಮಿಷನ್ನಂಥ ಮಹತ್ವದ ಯೋಜನೆಗಳನ್ನು ಜಾರಿಮಾಡಿತು.
ಪ್ರಧಾನ ಮಂತ್ರಿ ಆವಾಸ್ ಯೋಜನೆ, ದೀನದಯಾಳ್ ವಿದ್ಯುತ್ ಯೋಜನೆ, ಮುದ್ರಾ, ಕೃಷಿ ಸಮ್ಮಾನ್, ಆಯುಷ್ಮಾನ್ ಭಾರತ್ ಯೋಜನೆಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸರ್ವವ್ಯಾಪಿ, ಸರ್ವಸ್ಪರ್ಶಿ ಆಡಳಿತವನ್ನು ನೀಡಲಾಗುತ್ತಿದೆ. ವಿಶ್ವದ ಅನೇಕ ಬಲಿಷ್ಠ ರಾಷ್ಟ್ರಗಳು ಕೋವಿಡ್ನಿಂದ ಆರ್ಥಿಕ ಸಂಕಷ್ಟವನ್ನು ಕಾಣುತ್ತಿದ್ದರೆ, ಭಾರತ ದೇಶ ಶೇ.7 ರ ನಿರಂತರ ಬೆಳವಣಿಗೆಯನ್ನು ಕಾಣುತ್ತಿದೆ. ಜನರ ಪ್ರಾಣ ಉಳಿಸಿ, ಅವರಿಗೆ ಆಹಾರ, ಆರೋಗ್ಯ ಕೇಂದ್ರ ಸರಕಾರ ಕಲ್ಪಿಸಿದೆ ಎಂದರು. ಈ ಸಂದರ್ಭದಲ್ಲಿ ಸೋಮನಗೌಡ, ನಿಂಗಪ್ಪ ಗುಡಿಹಾಳ, ಯಂಕನಗೌಡ ಹಡಗಲಿ, ಉಪ್ಪಲದೊಡ್ಡಿ ನಿರುಪಾದಿ ಊರಿನ ಗುರುಹಿರಿಯರು ಕಾರ್ಯಕರ್ತರು ಯುವ ಮಿತ್ರರು ಇನ್ನಿತರ ಉಪಸ್ಥಿತರಿದ್ದರು