ಉತ್ತರಪ್ರಭ ಸುದ್ದಿ,
ಆಲಮಟ್ಟಿ: ಪಟ್ಟಣದ ರೇಲ್ವೆ ಸ್ಟೇಷನ್ ರಸ್ತೆಯ ಹಜರತ್ ಮಾಬೂಸುಭಾನಿ ದರ್ಗಾ ಗಂಧ ಹಾಗೂ ಉರುಸು ಕಾರ್ಯಕ್ರಮ ಇದೇ ನ. 5 ರಿಂದ ಎರಡು ದಿನಗಳ ಕಾಲ ನಡೆಯಲಿದೆ. ಇದೇ ಶನಿವಾರ 5 ರಂದು ಸಂಜೆ 5 ಕ್ಕೆ ಚಿಮ್ಮಲಗಿ ಭಾಗ-1 ಎ ಗ್ರಾಮದ ಇಬ್ರಾಹಿಂ ತೆಲಗಿ ಅವರ ಮನೆಯಿಂದ ಕುದುರೆ ಸಮೇತವಾಗಿ ಹೊರಡುವ ಗಂಧದ ಮೆರವಣಿಗೆ ಆಲಮಟ್ಟಿಯ ನಾನಾ ಕಡೆ ಸಂಚರಿಸಲಿದೆ.ದರ್ಗಾಕ್ಕೆ ಗಂಧ ಏರಿಸುವ ಕಾರ್ಯಕ್ರಮ ರಾತ್ರಿ ನಡೆಯಲಿದ್ದು ಜೊತೆಗೆ ಅನ್ನಸಂತರ್ಪಣೆ ಜರುಗಲಿದೆ. ಮಾರನೆಯದಿನ ಭಾನುವಾರ ಉರುಸು ಜರುಗಲಿದ್ದು, ತನ್ನಿಮಿತ್ತ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಶಾಸಕ ಶಿವಾನಂದ ಪಾಟೀಲ, ಲಕ್ಷ್ಮೇಶ್ವರದ ದೂದನಾನಾ, ಮುಖ್ಯ ಎಂಜಿನಿಯರ್ ಎಚ್. ಸುರೇಶ, ಡಿ. ಬಸವರಾಜ ಮತ್ತೀತರರು ಪಾಲ್ಗೊಳ್ಳಲಿದ್ದಾರೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಎನ್ ಡಿಎ ಗೆ ಆಯ್ಕೆಯಾಗಿರುವ ಅಭಿಷೇಕ ಖ್ಯಾಡಿ, ಹಸನ್ ಡೋಂಗ್ರಿ ಯಂಡಿಗೇರಿ, ಮುದಕಪ್ಪ ಕುಂಬಾರ, ಭಾಷಾಸಾಬ್ ಮನಗೂಳಿ, ಚನ್ನಬಸು ತಳವಾರ, ಲಾಲ್ ಸಾಬ್ ಗಡ್ಡಿ ಸೇರಿದಂತೆ ನಾನಾ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದು ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷ ಎಂ.ಆರ್. ಕಮತಗಿ ತಿಳಿಸಿದ್ದಾರೆ.