ಉತ್ತರಪ್ರಭ ಸುದ್ದಿ
ಆಲಮಟ್ಟಿ: ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯ ಸಂರಕ್ಷಣೆಯ ಜತೆಗೆ ಅರಣ್ಯ ಬೆಳೆಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದ್ದಾರೆ, ಕರ್ತವ್ಯದಲ್ಲಿರುವಾಗ ಹುತಾತ್ಮರಾಗುವವರ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ, ಅವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಚಿಕ್ಕಗಲಗಲಿ ವಲಯ ಅರಣ್ಯ ಅಧಿಕಾರಿ ರಾಜಶೇಖರ ಲಮಾಣಿ ಹೇಳಿದರು.
ಇಲ್ಲಿಯ ಡ್ಯಾಂ ನರ್ಸರಿಯಲ್ಲಿ ಭಾನುವಾರ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಆನೆ ತುಳಿತದಿಂದ ಹುತಾತ್ಮರಾದ ಎಸ್. ಮಣಿಕಂಠನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ ಮಾತನಾಡಿ, “1730 ಸೆಪ್ಟಂಬರ್ 11 ರಂದು ಜೋಧಪುರನ ಮಹಾರಾಜ ಅಭಯಸಿಂಗ್ ನ ಸೈನಿಕರು ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು, ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯಿ ಸಮುದಾಯದ ಸುಮಾರು 360 ಕ್ಕೂ ಅಧಿಕ ಜನರನ್ನು ಕೊಲ್ಲಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ’ ಎಂದರು.
ಆರ್ ಎಫ್ ಓ ಯಶವಂತ ರಾಠೋಡ, ಉಪ ವಲಯ ಅರಣ್ಯಾಧಿಕಾರಿಗಳಾದ ಸತೀಶ ಗಲಗಲಿ, ಮೃತ್ಯುಂಜಯ ಬಿದರಕುಂದಿ, ಸಂತೋಷ ರಾಠೋಡ, ಅರಣ್ಯ ರಕ್ಷಕರಾದ ಪ್ರವೀಣ ಹಚ್ಯಾಳಕರ, ವಿಜಯಲಕ್ಷ್ಮಿ ರೆಡ್ಡಿ, ಎ.ಎಸ್. ಕಾಳೆ, ಅಶೋಕ ಮೇಲಿನಮನಿ, ಆನಂದ ದುಲಾರಿ ಅರಣ್ಯ ಸಿಬ್ಬಂದಿಗಳು, ದಿನಗೂಲಿಗಳು ಇದ್ದರು.