ಆಲಮಟ್ಟಿ : ಅನ್ನದಾಸೋಹ, ಖಾದಿಧಾರಿ, ಪತ್ರಕರ್ತ, ಸಂಪಾದಕರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಶೇಷ ಕೊಡುಗೆ ನೀಡಿದ ಅನರ್ಘ್ಯ ರತ್ನ, ಶರಣ ಮಂಜಪ್ಪ ಹರ್ಡೇಕರ ಅವರ ಜನ್ಮ ದಿನವದಂದು ಕರುನಾಡ ಗಾಂಧಿ ಉತ್ಸವವನ್ನು ಸರ್ಕಾರ ಮಾಡಬೇಕು ಎಂದು ನಿಡಗುಂದಿ ತಾಲೂಕು ಕಾನಿಪ ಅಧ್ಯಕ್ಷ ಶಂಕರ ಜಲ್ಲಿ ಹೇಳಿದರು.
ಆಲಮಟ್ಟಿಯ ಶಾಸ್ತ್ರಿ ವೃತ್ತದಲ್ಲಿ ಮಂಜಪ್ಪ ಹರ್ಡೇಕರ ಅಭಿಮಾನಿಗಳು ಆಯೋಜಿಸಿದ್ದ ಮಂಜಪ್ಪ ಹರ್ಡೇಕರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಮಂಜಪ್ಪ ಹರ್ಡೇಕರ ಅವರ ಕೊಡುಗೆ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಅಪಾರವಾಗಿದೆ ಎಂದರು. ಮಂಜಪ್ಪನವರು 1913ರಲ್ಲಿ ಪ್ರಪ್ರಥಮವಾಗಿ ದಾವಣಗೆರೆಯಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿ ಸಾರ್ವಜನಿಕವಾಗಿ ಆಚರಿಸಿದ್ದರು. ಬಾಲಗಂಗಾಧರ ತಿಲಕ ಅವರ ಸ್ವಾತಂತ್ರ್ಯ ಚಳುವಳಿಗೆ ಪ್ರಭಾವಿತರಾಗಿ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೋರಾಟಕ್ಕೆ ಧುಮಿಕಿದರು. ಮಹೋನ್ನತ ಹೋರಾಟಕ್ಕೆಹಿನ್ನಡೆಯಾಗಬಾರದು ಎನ್ನುವ ಉದ್ದೇಶದಿಂದ ಮದುವೆಯನ್ನೇ ನಿರಾಕರಿಸಿದ ಮಹಾನುಭಾವ ಮಂಜಪ್ಪನವರು ಕಾರ, ಉಪ್ಪು, ಹುಳಿ ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸಿದ್ದರು ಎಂದರು.

ಸರಕಾರ ಮಂಜಪ್ಪ ಹಡೇ೯ಕರ ಉತ್ಸವ ಆಚರಿಸಲಿ- ಶಂಕರ ಜಲ್ಲಿ


1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾಗಾಂಧೀಜಿಯವರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ವಿಜಾಪುರ ಜಿಲ್ಲೆಯಿಂದ ಬಸವಸೇವಾದಳ ಕಟ್ಟಿಕೊಂಡು ಅನ್ನದಾಸೋಹದ ಕಾರ್ಯವನ್ನು ಯಶಸ್ವಿಗೊಳಿಸಿದ್ದರು. ಬಸವಣ್ಣನವರ ಕುರಿತು ಗಾಂಧೀಜಿಯವರಿಗೆ ಅನುಭವ ಮಂಟಪ, ಶರಣರ ಬಗ್ಗೆ ಹಲವಾರು ವಿಷಯಗಳನ್ನು ಗಾಂಧೀಜಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದರು ಎಂದು ಸ್ಮರಿಸಿದರು.
ಮಂಜಪ್ಪನವರು ಪತ್ರಕರ್ತರಾಗಿ ಸಂಪಾದಕರಾಗಿ ತಾವೇ ಸ್ವತಃ ಧನುರ್ಧಾರಿ ಎಂಬ ಪತ್ರಿಕೆಯನ್ನು ಹೊರತಂದು ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದರು. ಇದರಿಂದ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಜೈಲು ಸೇರುವಂತಾಗಿತ್ತು. ಮಂಜಪ್ಪನವರು ಕಾರವಾರ ಜಿಲ್ಲೆಯ ಬನವಾಸಿ ಗ್ರಾಮದಲ್ಲಿ 1886 ಫೆ.18ರಂದು ಜನಿಸಿದ ಅವರು ಪ್ರಾಥಮಿಕ ಶಿಕ್ಷಣದಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಅವರು ಖಾಸಗಿ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 1926ರಲ್ಲಿ ಇಂಡಿ ತಾಲೂಕಿನ ಬಂಥನಾಳದ ಸಂಗನಬಸವಸ್ವಾಮಿಗಳ ಮಾರ್ಗದರ್ಶನದಂತೆ ಆಲಮಟ್ಟಿಗೆ ಆಗಮಿಸಿದ ಅವರು ಇಲ್ಲಿನ ಪಾಟೀಲ ಮನೆತನದವರು ನೀಡಿದ ಜಾಗೆಯಲ್ಲಿ ಆಶ್ರಮ ನಿರ್ಮಿಸಿಕೊಂಡು ಅಲ್ಲಿ ಶಿಕ್ಷಣ ಹಾಗೂ ಅನ್ನದಾಸೋಹದ ಕ್ರಾಂತಿಯನ್ನೇ ಮಾಡಿದ್ದರು. ಇದಕ್ಕೂ ಮುಂಚೆ ಅವರು ಹರಿಹರದ ರೈಲು ನಿಲ್ದಾಣದ ಸಮೀಪದಲ್ಲಿ ಹರಿದ ತುಂಗಭದ್ರಾ ನದಿ ತೀರದಲ್ಲಿ ಸತ್ಯಾಗ್ರಹ ಆಶ್ರಮ ನಿರ್ಮಿಸಿ ರಾಷ್ಟ್ರಧರ್ಮ ಮತ್ತು ಸತ್ಯಾಗ್ರಹ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಹೀಗೆ ಹಲವಾರು ಸೇವೆಯನ್ನು ಸ್ವಾತಂತ್ರ್ಯಕ್ಕಾಗಿ ತಮ್ಮ ವೈಯಕ್ತಿಕ ಬದುಕನ್ನು ಮುಡುಪಾಗಿಟ್ಟು ಎಲ್ಲ ಧರ್ಮಗಳಿಗಿಂತಲೂ ರಾಷ್ಟ್ರಧರ್ಮ ಮುಖ್ಯವೆಂದು ಪ್ರತಿಪಾದಿಸಿದ ಅವರ ಕಾಳಜಿಯನ್ನು ಗಮನಿಸಿ ನಾಡಿನ ಜನರು ಅವರಿಗೆ ಕರ್ನಾಟಕ ಗಾಂಧಿ ಮತ್ತು ರಾಷ್ಟ್ರ ಧರ್ಮಧೃಷ್ಟಾರ ಹರ್ಡೇಕರ ಮಂಜಪ್ಪನವರೆಂದು ಕರೆಯುತ್ತಿದ್ದರು. ಆದ್ದರಿಂದ ರಾಜ್ಯ ಸರ್ಕಾರ ಅವರ ಜನ್ಮದಿನವನ್ನು ಕರುನಾಡ ಗಾಂಧಿ ಉತ್ಸವ ಎಂದು ಆಚರಿಸಬೇಕು ಎಂದು ಶಂಕರ ಜಲ್ಲಿ ನುಡಿದರು.
ಆಲಮಟ್ಟಿ ಗ್ರಾ.ಪಂ.ಅಧ್ಯಕ್ಷ ಮಂಜುನಾಥ ಹಿರೇಮಠ, ದೇವರಾಜ ಹಿರೇಮನಿ, ಮುದಕಪ್ಪ ಕುಂಬಾರ, ಬಸವರಾಜ ಹೆರಕಲ್ಲ, ಕನಕರಾಜ ದೊಡಮನಿ, ಬಿ.ಎಂ.ಮಠಪತಿ, ಸೈಯ್ಯದ ಮುದ್ನಾಳ, ವಿರೂಪಾಕ್ಷಿ ಮಾದರ ಮೊದಲಾದವರಿದ್ದರು.
ಫೋಟೊ ಫೈಲ್ : ಆಲಮಟ್ಟಿಯಲ್ಲಿ ಕರುನಾಡು ಗಾಂಧಿ ಮಂಜಪ್ಪ ಹರ್ಡೇಕರ ಅವರ ಜನ್ಮದಿನವನ್ನು ಆಚರಿಸಲಾಯಿತು.

Leave a Reply

Your email address will not be published. Required fields are marked *

You May Also Like

ಬಂಗಾಳದಲ್ಲಿ ಕೊರೊನಾದೊಂದಿಗೆ ಚಂಡಮಾರುತದ ಕಾಟ!

ಕೊರೊನಾ ವೈರಸ್ ನ ಹಾವಳಿಯ ಮಧ್ಯೆಯೇ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸುತ್ತಿದೆ.

ಕಳ್ಳರ ಕಣ್ಣು ಈಗ ಆಡಿನ ಮ್ಯಾಲೆ…!!! ಸ್ಕಾಪಿ೯ಯೋದಲ್ಲಿ ಬಂದು ಆಡು ಕದ್ದ ಖದೀಮರು?

ಉತ್ತರಪ್ರಭ ಸುದ್ದಿನಿಡಗುಂದಿ: ಕಳ್ಳತನದ ಹಾವಳಿ ಹಾಡುಹಗಲೇ ಶುರುವಾಗಿವೆ. ಜಿಲ್ಲೆಯಲ್ಲಿಗ ಮಕ್ಕಳ ಕಳ್ಳತನದ ಗುಲ್ಲು ಒಂದಡೆ ಆತಂಕ…

ಗದಗ ಜಿಲ್ಲೆಯ 15 ಕಂಟೇನ್ಮೆಂಟ್ ಪ್ರದೇಶಗಳ ನಿರ್ಬಂಧ ತೆರವು

ಗದಗ: ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 15 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು.

ಶುದ್ಧ ನೀರು ಪೂರೈಕೆಗೆ ಕರವೇ (ಪ್ರವೀಣಕುಮಾರ ಶೆಟ್ಟಿ ಬಣ) ಒತ್ತಾಯ

ರೋಗ ರುಜಿನಗಳಿಗೆ ಕಲುಷಿತ ನೀರು ಕಾರಣವಾಗುತ್ತಿದ್ದು, ಅದರಲ್ಲೂ ಇದೀಗ ಬೇಸಿಗೆ ಪ್ರಾರಂಭವಾಗಿದ್ದು ನೀರಿನಿಂದ ಅನೇಕ ಸಮಸ್ಯೆಗಳು ಉದ್ಬವಾಗುತ್ತಿದ್ದು ಪಟ್ಟಣದಲ್ಲಿ ಅನೇಕ ಹೋಟೆಲ್‌ಗಳು ಡಾಬಾ ಬೇಕರಿ ಹಾಗೂ ಬೀದಿ ಬದಿ ಆಹಾರ ಮಾರಾಟ ಮಾಡುವವರು ಜನರಿಗೆ ಕಲುಷಿತ ನೀರು ಪೂರೈಸುವುದರಿಂದ ರೋಗಗಳು ಹೆಚ್ಚುವಂತಾಗಿದೆ.