ಉತ್ತರಪ್ರಭ ಸುದ್ದಿ
ಶಿರಹಟ್ಟಿ: ಜನೆವರಿ 26 ರಂದು ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವದು ತೀವ್ರ ಖಂಡನೀಯವಾದುದು ಎಂದು ತಾಲೂಕು ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಕಾಂತ ಈಳಗೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉತ್ತರಪ್ರಭದೊಂದಿಗೆ ಮಾತನಾಡಿದ ಅವರು “ವಿದ್ಯೆಯಿಂದ ಸ್ವತಂತ್ರರಾಗಿ” “ಸಂಘಟನೆಯಿಂದ ಬಲಯುತರಾಗಿ” ಎಂಬ ಸಂದೇಶವನ್ನು ಸಾರಿದಂತಹ ಸಂತ ಮಾನವತಾವಾದಿ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವ ಚಿತ್ರವಿರುವ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.
ಸಮಾಜದಲ್ಲಿ ಸಮಾನತೆಯನ್ನು ಎತ್ತಿಹಿಡಿದು, ಜಾತಿ, ಮತ ಭೇಧಗಳನ್ನು ಧಿಕ್ಕರಿಸಿ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಚೇತನ ಶ್ರೀ ನಾರಾಯಣ ಗುರುಗಳು, ಒಂದೇ, ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂದು ಸಾರಿ ಸಮಾಜಕ್ಕೆ ಬೆಳಕು ಮೂಡಿಸಿದವರು. ಗುರುಗಳ ಕೊಟ್ಯಾಂತರ ಅನುಯಾಯಿಗಳ ಭಕ್ತಿ ಮತ್ತು ಭಾವನೆಗಳಿಗೆ ಅಗೌರವ ತೋರಿಸಿರುವುದು ವಿಷಾದನೀಯ.
ಪ್ರತಿ ವರ್ಷವೂ ಗಣರಾಜ್ಯೋತ್ಸವ ಪರೇಡ್ ನಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ರಾಂತಿಕಾರರ ಸ್ಥಬ್ದ ಚಿತ್ರವನ್ನು ಅಳವಡಿಸುವುದು ಸರ್ಕಾರದ ರೂಢಿಯಲ್ಲಿದೆ. ಕೇಂದ್ರ ಸರಕಾರದ ಸಮೀತಿ ಈ ಬಗ್ಗೆ ಪುನರ್ಪರಿಶೀಲನೆ ಮಾಡಿ ಗುರುದೇವರ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಇರುವಂತೆ ಸೂಕ್ತ ಕ್ರಮಕೈಗೊಳ್ಳ ಬೇಕೆಂದು ಶಿರಹಟ್ಟಿ ತಾಲೂಕು ಆರ್ಯ ಈಡಿಗ ಸಂಘ ಒತ್ತಾಯಿಸುತ್ತದೆ ಎಂದು ಹೇಳಿದರು.