ಧಾರವಾಡ: ಜಿಲ್ಲೆಯಲ್ಲಿ ಮುಖ್ಯ ಬೆಳೆಯೇ ಮೆಣಸಿನ ಕಾಯಿ ಬೆಳೆ. ಆದರೆ ಮೆಣಸಿನಕಾಯಿ ಬೆಳೆದ ರೈತರಿಗೆ ಈ ಭಾರಿ ಮೆಣಸಿನಕಾಯಿ ಖಾರವಾಗಿ ಮಾರ್ಪಟ್ಟಿದೆ. ಈ ಕಾರಣದಿಂದ ಬೆಲೆ ಇಲ್ಲದ ಕಾರಣ ಬೆಳೆದ ಬೆಳೆಯನ್ನು ಅನ್ನದಾತ ನಾಶಪಡಿಸುತ್ತಿದ್ದಾನೆ.
ಲಾಕಡೌನ್ ಹಿನ್ನೆಲೆಯಲ್ಲಿ ಮೆಣಸಿನಕಾಯಿ ದರ ಕುಸಿತಗೊಂಡಿದ್ದು, ಅದನ್ನು ಬೆಳೆದ ರೈತ ಇದೀಗ ಕಣ್ಣೀರು ಹಾಕುವಂತಾಗಿದೆ.
ಮೆಣಸಿನಕಾಯಿಗೆ ಬೆಲೆ ಇಲ್ಲದ ಕಾರಣ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ರೈತನೋರ್ವ ತಾನು ಬೆಳೆದ ಮೆಣಸಿನಕಾಯಿ ಬೆಳೆಯನ್ನೇ ನಾಶಪಡಿಸಿದ್ದಾನೆ.
ರೈತ ಅಜ್ಜಪ್ಪ, ತನ್ನ 3 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ಆದರೆ, ಪ್ರಸಕ್ತ ಕೊರೊನಾದಿಂದಾಗಿ ಲಾಕಡೌನ್ ಆಗಿದ್ದು, ಪ್ರತಿ ಕೆಜಿ ಮೆಣಸಿನಕಾಯಿಗೆ 5 ರೂಪಾಯಿ ಮಾತ್ರ ಬೆಲೆ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿಯನ್ನು ಯಾರೂ ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸುಮಾರು 25 ಸಾವಿರಕ್ಕಿಂತಲೂ ಹೆಚ್ಚು ಖರ್ಚು ಮಾಡಿದ ರೈತ, ತನಗೆ ಲಾಭ ಬರದೇ ಇರುವುದರಿಂದ ಇಡೀ ಹೊಲದಲ್ಲಿನ ಮೆಣಸಿನಕಾಯಿ ಬೆಳೆಯನ್ನು ನಾಶಪಡಿಸಿದ್ದಾನೆ.
ತೋಟಗಾರಿಕಾ ಬೆಳೆಗಳಿಗೆ ಬೆಲೆ ಸಿಗದೇ ಅನಿವಾರ್ಯವಾಗಿ ಅವುಗಳನ್ನು ನಾಶಪಡಿಸುತ್ತಿದ್ದಾರೆ. ಅಮ್ಮಿನಬಾವಿ ಗ್ರಾಮದಲ್ಲಿ ಸುಮಾರು 10 ಕ್ಕೂ ಹೆಚ್ಚು ರೈತರು ತೋಟಗಾರಿಕಾ ಬೆಳೆಯನ್ನು ನಾಶಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಏನೇ ಆಗಲಿ ಕೊರೊನಾ ಕರಿ ನೆರಳು ಬೆಳೆ ಬೆಳೆದು ಜಗತ್ತಿಗೆ ಅನ್ನ ಕೊಡುವ ಸ್ವಾಭಿಮಾನಿ ರೈತರ ನೆಮ್ಮದಿಗೂ ಭಂಗ ತಂದಿದೆ.