ಬೆಂಗಳೂರು: ಸಹಕಾರ ಬ್ಯಾಂಕ್ ಗಳ ಮೂಲಕ ಈ ವರ್ಷ20,810 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗುರಿ ತಲುಪಲು ರಾಜ್ಯದ 212 ಡಿಸಿಸಿ ಬ್ಯಾಂಕ್ ಗಳಿಗೆ ತಿಳಿಸಲಾಗಿದೆ. 303 ಲಕ್ಷ ರೈತರನ್ನು ತಲುಪಲು ಹೇಳಿದ್ದೇವೆ ಎಂದರು.
2020-21 ನೇ ಸಾಲಿನಲ್ಲಿ 15400ಕೋಟಿ ರೂ. ಗುರಿ ನೀಡಲಾಗಿತ್ತು.17901 ಕೋಟಿ ರೂ. ತಲುಪಲಾಗಿದೆ. ಇದರಲ್ಲಿ ಅಲ್ಪವಾಧಿ, ಮಧ್ಯಮಾವಧಿ, ದೀರ್ಘಾವಧಿ ಸಾಲಗಳು ಸೇರಿವೆ ಎಂದು ಹೇಳಿದರು.ನಾವು ಕೊಟ್ಟಿದ್ದ ಟಾರ್ಗೆಟ್ ಹೆಚ್ಚಿನ ಮಟ್ಟದಲ್ಲೇ ರೀಚ್ ಆಗಿದ್ದಾರೆ. ಲಾಕ್ಡೌನ್ ಮುಗಿದ ಬಳಿಕ ಎಲ್ಲಾ ಡಿಸಿಸಿ ಬ್ಯಾಂಕ್ಗಳಿಗೆ ಭೇಟಿ ಕೊಡುವುದಾಗಿ ಅವರು ಹೇಳಿದರು.
ಕಳೆದ ವರ್ಷ ಐದಾರು ಡಿಸಿಸಿ ಬ್ಯಾಂಕ್ಗಳು ಸ್ವಲ್ಪ ಗುರಿ ತಲುಪಿಲ್ಲ. ಅವರಿಗೆ ಈ ವರ್ಷ ಗುರಿ ತಲುಪಲೇಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು. ಮೈಸೂರು ಜಿಲ್ಲೆಯಲ್ಲಿ ಸಾವಿನ ವಿಚಾರ ಮುಚ್ಚಿಟ್ಟಿದ್ದಾರೆ ಎಂಬ ಶಾಸಕ ಸಾ.ರಾ. ಮಹೇಶ್ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಆ ಬಗ್ಗೆ ನಂಗೆ ಗೊತ್ತಿಲ್ಲ. ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ನಮ್ಮ ಟಾರ್ಗೆಟ್ ಕೋರೊನಾ ಮುಕ್ತ ಮಾಡೋದು. ಆ ಬಗ್ಗೆ ಎಲ್ಲರನ್ನೂ ಕೂರಿಸಿಕೊಂಡು ತಿಳಿಸಿದ್ದೇನೆ.