ರೋಣ: ರಾಜೀವ್ ಗಾಂಧಿ ಆಯುರ್ವೇದಿಕ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಗುವದು ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್.ಪಾಟೀಲ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಆಸ್ಪತ್ರೆಯಲ್ಲಿ ಇಪ್ಪತ್ತು ಆಮ್ಲಜಕ ಹಾಸಿಗೆ, ಐದು ವೆಂಟಿಲೇಟರ್ ಹಾಸಿಗೆ ಹೊಂದಿದ್ದು, ಬಿಪಿಎಲ್ ಕಾರ್ಡದಾರರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಹೀಗಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಆಸ್ಪತ್ರೆಯು ಬಡವರ ಪಾಲಿಗೆ ವರದಾನವಾಗಬೇಕೆಂಬ ಮಹದಾಸೆ ನಮ್ಮದಾಗಿದೆ. ಬಡವರಿಗೆ ಈ ಮಹಾಮಾರಿ ದುಡಿಯುವ ಕೈಯನ್ನು ಕಟ್ಟಿಹಾಕುವ ಮೂಲಕ ಜೀವ ಹಿಂಡುತ್ತಿದೆ. ಇಂತಹ ಸಂಕಷ್ಟದ ದಿನಗಳಲ್ಲಿ ನಮ್ಮ ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಆಸ್ಪತ್ರೆ ಆರಂಭಿಸಲಾಗುತ್ತಿದೆ. ಜಿಲ್ಲಾದ್ಯಂತ ವೆಂಟಿಲೇಟರ್ ಬೆಡ್ ಅವಶ್ಯಕತೆ ಇರುವುದರಿಂದ ಕೋವಿಡ್ ಕೇರ್ ಸೆಂಟರ್ ಸೋಮವಾರ ಬೆಳಿಗ್ಗೆ ಜೂಮ್ ಆಪ್ ಹಾಗೂ ಯುಟ್ಯೂಬ್ ಮೂಲಕ ಹಾಳಕೇರೆ ಅನ್ನದಾನ ಮಹಾಸ್ವಾಮಿಗಳು ಹಾಗೂ ಗುಲಗಂಜಿಮಠದ ಗುರುಪಾದಸ್ವಾಮಿಗಳ ಸಾನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಮಾಜಿ ಸಚಿವ ಹಾಲಿ ಶಾಸಕ ಎಚ್.ಕೆ.ಪಾಟೀಲ ಅಧ್ಯಕ್ಷತೆಯಲ್ಲಿ ಆಸ್ಪತ್ರೆ ಉದ್ಘಾಟನೆಗೊಳ್ಳುವದು ಎಂದು ತಿಳಿಸಿದರು.