ಗಜೇಂದ್ರಗಡ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಮೀಪದ ದಕ್ಷಿಣ ಕಾಶಿ ಪ್ರಸಿದ್ಧಿಯ ಐತಿಹಾಸಿಕ ಶ್ರೀ ಕಾಲಕಾಲೇಶ್ವರ ಜಾತ್ರಾ ಮಹೋತ್ಸವವನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ರದ್ದುಮಾಡಲಾಗಿದೆ ಎಂದು ತಹಶೀಲ್ದಾರ ಎ.ಬಿ. ಕಲಘಟಗಿ ಹೇಳಿದರು.
ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಏ. 27 ರಂದು ನಡೆಯಬೇಕಿದ್ದ ಈ ಭಾಗದ ಐತಿಹಾಸಿಕ ಸಹಸ್ರಾರು ಭಕ್ತರ ಕುಲದೈವರಾದ ಶ್ರೀ ಕಾಲಕಾಲೇಶ್ವರ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲಾಗಿದೆ. ಕೋವಿಡ್ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೇ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ತೀವೃವಾಗಿ ಹಬ್ಬುತ್ತಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮತ್ತು ಸರ್ಕಾರದ ಮಾರ್ಗಸೂಚಿ ಅನ್ವಯ ಜಾತ್ರಾ ಮಹೋತ್ಸವನ್ನು ರದ್ದು ಮಾಡಲಾಗಿದೆ ಎಂದರು.
ಪಿಎಸ್ಐ ಗುರುಶಾಂತ್ ದಾಶ್ಯಾಳ ಮಾತನಾಡಿ, ಈ ಭಾಗದ ಸರ್ವಧರ್ಮಿಯರ ಭಾವೈಕೈತೆಯ ತಾಣ ಹಾಗು ಅಪಾರ ಭಕ್ತ ಸಮೂಹ ಹೊಂದಿರುವ ದಕ್ಷಿಣ ಕಾಶಿ ಪ್ರಸಿದ್ದಿ ಹೊಂದಿರುವ ಶ್ರೀ ಕಾಲಕಾಲೇಶ್ವರ ಜಾತ್ರಾ ಮಹೋತ್ಸವ ಕಳೆದ ವರ್ಷವೂ ಸಹ ಕೋವಿಡ್ನಿಂದಾಗಿ ಆಚರಣೆ ಮಾಡಿರಲಿಲ್ಲ. ಈ ಬಾರಿಯೂ ಸಹ ಕೋವಿಡ್ ನಿಯಂತ್ರಣಕ್ಕೆ ಬಾರದ ಪರಿಣಾಮ ರಾಜ್ಯದಲ್ಲಿ ಧಾರ್ಮಿಕ ಆಚರಣೆಗಳನ್ನು ಸರ್ಕಾರ ನಿಷೇಧಿಸಿದೆ. ಹೀಗಾಗಿ ಭಕ್ತರು ವಿನಾ ಕಾರಣ ದೇವಸ್ಥಾನಕ್ಕೆ ಬಂದು ಸೇರುವುದರಿಂದ ಮತ್ತಷ್ಟು ಅವಘಡಗಳಿಗೆ ಕಾರಣವಾಗಲಿದೆ. ದೇವಸ್ಥಾನದ ಸುತ್ತಲೂ ನಿಷೇಧಾಜ್ಞೆ ಹೇರಲಾಗುವುದು ಎಂದರು.
ದೇಗುಲದ ಧರ್ಮದರ್ಶಿ ಮಂಗಳಾದೇವಿ ದೇಶಮುಖ ಮಾತನಾಡಿ, ದಕ್ಷಿಣ ಕಾಶಿ ಪ್ರಸಿದ್ದಿಯ ಕಾಲಕಾಲೇಶ್ವರ ರಥೋತ್ಸವ ಉತ್ತರ ಕರ್ನಾಟಕದಲ್ಲೇ ಅತಿದೊಡ್ಡ ಜಾತ್ರಾಮಹೋತ್ಸವ ಆಗಿದೆ. ರಾಜ್ಯದ ಹಲವಾರು ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಈ ಮೊದಲು ಜಾತ್ರೆಗೆ ಅನುಮತಿ ನೀಡಲಾಗಿತ್ತು. ಹೀಗಾಗಿ ವಿಧಿವತ್ತಾಗಿ ಜಾತ್ರೆಗೆ ಸಂಪೂರ್ಣ ತಯಾರಿ ಮಾಡಿಕೊಳ್ಳಲಾಗಿತ್ತು. ದೇವಸ್ಥಾನಕ್ಕೆ ಸುಣ್ಣ, ಬಣ್ಣ ಸೇರಿ ತೇರನ್ನು ಕೂಡಾ ಹೊರಗೆ ತೆಗೆದು ಪೂಜೆ ಸಲ್ಲಿಸಲಾಗಿತ್ತು. ಆದರೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಜಾತ್ರೆ ರದ್ದು ಮಾಡಿ, ಆದೇಶಿಸಿದೆ. ಇದರಿಂದ ಜಾತ್ರೆಯ ಸಂಭ್ರಮದಲ್ಲಿದ್ದ ಭಕ್ತ ಸಮೂಹಕ್ಕೆ ನಿರಾಶೆಯಾಗಲಿದೆ. ಯಾವುದೇ ಕಾರಣಕ್ಕೂ ಸರ್ಕಾರದ ಆದೇಶ ಮೀರಿ ಜಾತ್ರೆ ಮಾಡುವುದು ಬೇಡ. ಭಕ್ತರು ಸಹಕರಿಸಬೇಕು ಎಂದು ವಿನಂತಿಸಿದರು.
ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ, ಯಶರಾಜ್ ಘೋರ್ಪಡೆ, ಮತ್ತಣ್ಣ ತಳವಾರ, ಪರಶುರಾಮ ಚಿಲಝರಿ, ಯಲ್ಲಪ್ಪ ಬಂಕದ, ಗಣೇಶ ಗಾಂಗಜಿ, ಬಾಳನಗೌಡ ಗೌಡರ, ಬಸವರಾಜ ಕನ್ಯಾಳ, ಆನಂದ ಭಾಂಡಗೆ, ಪ್ರಭು ಪೂಜಾರ, ಮಲ್ಲಪ್ಪ ಪೂಜಾರ, ಶರಣಪ್ಪ ಕನ್ಯಾಳ, ಕಳಕಯ್ಯ ಭಿಕ್ಷಾವತಿಮಠ ಸೇರಿದಂತೆ ಇನ್ನಿತರರು ಇದ್ದರು.