ಗದಗ: ಜಿಲ್ಲಾ ಪೈಲ್ವಾನರ ಮಾಶಾಸನ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ನೀಡುವ ವೇಳೆ ಜಟಾಪಟಿ ನಡೆದ ಘಟನೆ ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ.
ಜಿಲ್ಲೆಯ ಅನೇಕ ಪೈಲ್ವಾನರು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಲು ಬಂದಿದ್ದರು. ಈ ವೇಳೆ ನಮ್ಮ ಸರ್ಕಾರದ ಅವಧಿಯಲ್ಲಿಯೇ ಕಲಾವಿದರ ಮಾಶಾಸನ ಹೆಚ್ಚಿಸಿದೆ ಎಂದ ಸಚಿವ ಸಿ.ಸಿ ಪಾಟೀಲ್ ಹೇಳಿದರು. ಆಗ ನಿಮ್ಮ ಸರ್ಕಾರ ಮಾಡಿಲ್ಲ ಅಂತ ಸಚಿವರ ಮಾತಿಗೆ ಪೈಲ್ವಾನರು ತಿರುಗೇಟು ನೀಡಿದರು. ಈ ವೇಳೆ ಯಾರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೇ ಅಂತರ ಕಾಯ್ದುಕೊಂಡು, ಮನವಿ ಸ್ವೀಕರಿಸಿ ಬೇಡಿಕೆ ಇಡೇರಿಕೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ನಮ್ಮ ಬೇಡಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಆರೋಪಿಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪೈಲ್ವಾನರು ಹಾಗು ಪೊಲೀಸರ ಮದ್ಯೆ ಮಾತಿನ ಚಕಮಕಿ ನಡೆಯಿತು. ಇದರಿಂದ ಪೈಲ್ವಾನರ ವಿರುದ್ಧ ಸಚಿವ ಸಿ.ಸಿ ಪಾಟೀಲ್ ಗರಂ ಆದರು. ಹತ್ತಿರ ಬರಬೇಡಿ, ನಮ್ಮನ್ನು ಕೇಳಬೇಡಿ ಎಂದರೆ ನಾವು ಯಾರಿಗೆ ಕೇಳಬೇಕು? ಎಂದು ಪೈಲ್ವಾನರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೈಲ್ವಾನರನ್ನು ಸಮಾಧಾನ ಪಡಿಸಲು ಸಂಸದ ಶಿವಕುಮಾರ್ ಉದಾಸಿ ಮುಂದಾದರು. ಕೋವಿಡ್ ನಿಂದ ಮಾಶಾಸನ ವಿತರಣೆಯಲ್ಲಿ ವಿಳಂಭವಾಗಿದೆ. ಈ ಸಮಸ್ಯೆ ಕೇವಲ ಗದಗ ಜಿಲ್ಲೆಯ ಮಾತ್ರದ್ದಲ್ಲ. ಇಡೀ ರಾಜ್ಯದ ಸಮಸ್ಯೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರ ಜೊತೆಗೆ ಮಾತನಾಡಿ ಮಾಶಾಸನ ಕೊಡಿಸುವುದಾಗಿ ಸಂಸದ ಶಿವಕುಮಾರ್ ಉದಾಸಿ ಭರವಸೆ ನೀಡಿದರು.