ತಾಯಿ ಕೃತಿಯು ಒಂದು ಸಾಮಾಜಿಕ ಕಾದಂಬರಿಯಾಗಿದ್ದು, ಬಡತನದ ಬೇಗೆಯಲ್ಲಿ ಬಸವಳಿದರೂ ಜೀವನೋತ್ಸಾಹವನ್ನು ಕಳೆದುಕೊಳ್ಳದಂತ ಒಂದು ಸುಂದರ ಕುಟುಂಬದ ಬಗ್ಗೆ ಹೇಳುತ್ತ ಹೋಗುತ್ತದೆ. ಎಲ್ಲಿಯೂ ಬೇಸರ ಮೂಡಿಸದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಬರುವ ಪಾತ್ರಗಳು ಸ್ವಗತದೊಂದಿಗೆ ಅನಾವರಣಗೊಳ್ಳುತ್ತಾ ಹೋಗುತ್ತವೆ. ಕಾದಂಬರಿಯಲ್ಲಿ ಬರುವ ಪಾತ್ರಗಳಾದ ತಾಯಿ ಮಕ್ಕಳು, ಅಣ್ಣತಂಗಿಯರ ಬಾಂಧವ್ಯಗಳು ಭಾವನಾತ್ಮಕವಾಗಿ ಬೆಸೆದುಕೊಂಡಂತೆ ಭಾಸವಾಗುತ್ತವೆ. ಬದುಕಿನ ಸರಳ ಅನುಭವಗಳಿಗೆ ನಿಲುಕುವಂತಹ ವಾತಾವರಣ ಕಾದಂಬರಿಯಲ್ಲಿ ಮೂಡಿಬಂದಿದೆ.

ಕಾದಂಬರಿಯ ನಾಯಕಿರೇಣು ಸರಳ ಸುಂದರ ರೂಪವತಿಯಾಗಿದ್ದರೂ, ಕೂಡ ಬಡಕುಟುಂಬದಲ್ಲಿ ಜನಿಸಿದ ಒಂದೇ ಕಾರಣಕ್ಕಾಗಿ ವಿವಾಹದ ವಯಸ್ಸಿಗೆ ಬಂದಿದ್ದರೂ ಯಾರೂ ಕೂಡ ವರಿಸಲು ಮುಂದೆ ಬರುವುದಿಲ್ಲ. ಶ್ರೀಮಂತರ ಮನೆಗಳಲ್ಲಿ ಕಸ ಮುಸುರೆ ಕೆಲಸ ಮಾಡಿಕೊಂಡು ಇದ್ದುದರಲ್ಲೇ ಎರಡು ಹೊತ್ತು ಊಟ ಮಾಡಿಕೊಂಡು ಬಡತನದ ಕೂಪದಲ್ಲಿ ನರಳುತ್ತಿರುವ ನಾಲ್ಕೈದು ಮಂದಿ ಇರುವ ಕುಟುಂಬವೊಂದು ತನ್ನ ಮನೆ ಮಗಳ ಮದುವೆ ಖರ್ಚನ್ನು ಭರಿಸುವುದು ತೀರಾಕಷ್ಟವೇ. ಹಾಗೆಂದು ಅವರೆಂದೂ ಕೈಕಟ್ಟಿ ಕೂರಲಿಲ್ಲ. ಜವಾಬ್ದಾರಿ ಇಲ್ಲದ ತಂದೆ, ಹಗಲಿರುಳು ತನ್ನ ಕುಟುಂಬಕ್ಕಾಗಿ ದುಡಿಯುವ ತಾಯಿ, ಅಪ್ರಾಪ್ತ ವಯಸ್ಸಿನಲ್ಲೇ ಮನೆಯ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡುತ್ತಿರುವ ಮಗ, ಬಂದ ಸಂಬಂಧಗಳೆಲ್ಲವೂ ವರದಕ್ಷಿಣೆ ಎಂಬ ಭೂತ ಹೊಕ್ಕಿ ಬಂದವೇ ಆಗಿರುತ್ತವೆ. ವರದಕ್ಷಿಣೆ, ವರೋಪಚಾರಕ್ಕೆ ಆರ್ಥಿಕವಾಗಿ ಅಷ್ಟೇನೂ ಪ್ರಬಲವಲ್ಲದ ರೇಣುವಿನ ಕುಟುಂಬ ಬಂದ ನೆಂಟರಿಷ್ಟರ ಉಪಚಾರಕ್ಕೆ ತತ್ತರಿಸಿ ಹೋಗುತ್ತದೆ.

ಪುಸ್ತಕ ಪರಿಚಯ

ಲೇಖಕರು: ಶರಣಬಸಪ್ಪಕುಂಬಾರ್.

ಶೀರ್ಷಿಕೆ – ತಾಯಿ.

ಇಂತಹ ಸಂದರ್ಭದಲ್ಲಿ ರೇಣುವಿನ ತಾಯಿ ಪಾರ್ವತಿ ತನ್ನ ಅಣ್ಣ ತಮ್ಮಂದಿರ ನೆರವಿನಿಂದಲಾದರೂ ಮಗಳ ವಿವಾಹ ಕಾರ್ಯವನ್ನು ನೆರವೇರಿಸೋಣವೆಂದು ತೀರ್ಮಾನಿಸಿ ವರ ಶೋಧನೆಯಲ್ಲಿ ತೊಡಗಿದ್ದಾಗ ಮರಳುಗಾಡಿನಲ್ಲಿ ಓಯಸಿಸ್ ದೊರೆತಂತೆ ಪಾರ್ವತಿಗೆತೀರಾ ಪರಿಚಯದವನಾದ ಆಪ್ತ ಸಹೋದರನಂತಿದ್ದ ಸಾಗರನ ಪರಿಚಯವಾಗುತ್ತದೆ. ಸಣ್ಣ ನೌಕರಿಯೊಂದರಲ್ಲಿ ಕೆಲಸ ಮಾಡುತ್ತ ಇದ್ದುದರಲ್ಲೇ ಅನುಕೂಲಸ್ಥನಾಗಿದ್ದ ಸಾಗರ ಅನಾರೋಗ್ಯ ನಿಮಿತ್ತ ಹೆಂಡತಿಯನ್ನು ಕಳೆದುಕೊಂಡು ವಿಧುರನಾಗಿದ್ದ. ತನ್ನ ನೆನಪಾಗಿ ಒಂದು ಮಗುವನ್ನು ಅವನ ಕೈಲಿಟ್ಟು ಹೆಂಡತಿ ಕಣ್ಮುಚ್ಚಿದ್ದಳು.

ರೇಣುವಿಗೆ ವರನನ್ನು ಹುಡುಕುತ್ತಿದ್ದ ಸುದ್ಧಿ ತಿಳಿದು ವರದಕ್ಷಿಣೆ ಇಲ್ಲದೆ ತಾನೇ ರೇಣುವನ್ನು ವಿವಾಹವಾಗಿ ಆಕೆಗೆ ಬಾಳು ಕೊಡುವುದರ ಮೂಲಕ ಆ ಕುಟುಂಬಕ್ಕೆಆಸರೆಯಾಗುವ ಹಾಗೂ ತಾಯಿಯ ವಾತ್ಸಲ್ಯದಿಂದ ವಂಚಿತವಾದ ತನ್ನ ಮಗುವಿಗೆ ಮತ್ತೆ ಆ ಸುಖವನ್ನು ನೀಡುವ ಹಂಬಲದಲ್ಲಿ ರೇಣುವಿನ ಕೈ ಹಿಡಿಯಲು ಮುಂದೆ ಬರುತ್ತಾನೆ.

ತಾನೊಂದು ಬಗೆದರೆ ವಿಧಿಯೊಂದು ಬಗೆಯಿತು ಎಂಬಂತೆ ರೇಣು ಸಾಗರನನ್ನು ಕೈಹಿಡಿದು, ಅವನ ಮಗುವಿಗೆ ತಾಯಿಯಾಗುವ ಪರಮ ಸುಖವನ್ನು ಕಲ್ಪಿಸಿಕೊಂಡು ವಿಹರಿಸುತ್ತಿರುವಾಗಲೇ ಸಾಗರನು ರೈಲು ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದು, ಅನಿರೀಕ್ಷಿತ ಆಘಾತದ ಹೊಡೆತಕ್ಕೆ ಸಿಲುಕಿ ಅವಳು ನಿಂತ ನೆಲದಲ್ಲೇ ಕುಸಿದು ಬಿದ್ದು ಅಸು ನೀಗುತ್ತಾಳೆ. ಊಹಿಸಲಸಾಧ್ಯತಿರುವನ್ನು ಪಡೆದ ಕಾದಂಬರಿಯು ದುರಂತ ಅಂತ್ಯದಲ್ಲಿ ಮುಕ್ತಾಯವಾಗುತ್ತದೆ. ರೇಣು ,ಸಾಗರ ನಂತ ಅಮಾಯಕ ಜೀವಿಗಳು ವಿಧಿ ಹೆಣೆದ ಬಲೆಗೆ ಸಿಲುಕಿದ್ದಕ್ಕೆ ಕಣ್ಣಲ್ಲಿ ಕಂಬನಿಯೊಂದು ಮೂಡುತ್ತದೆ. ಅಷ್ಟೊಂದು ವಾಸ್ತವಿಕ ಚಿತ್ರಣ ಕಾದಂಬರಿಯಲ್ಲಿ ಮೂಡಿ ಬಂದಿದೆ.

– ಸರ್ವಮಂಗಳ ಜಯರಾಂ, ಸಾಹಿತಿ

Leave a Reply

Your email address will not be published. Required fields are marked *

You May Also Like

ಆದರ್ಶಿ ಶಿಕ್ಷಕಿ ಪ್ರಶಸ್ತಿ, ಸನ್ಮಾನ

ಮುಳಗುಂದ : ದಲಿತ ಸಾಹಿತ್ಯ ಪರಿಷತ್ತು ಗದಗ ತಾಲೂಕ ಘಟಕದ ವತಿಯಿಂದ ಸಾವಿತ್ರಿಬಾಯಿ ಪುಲೆ ಅವರ…

ನಿಮ್ಮೊಡನಿದ್ದೂ ನಿಮ್ಮಂತಾಗದೆ

ಪ್ರಸ್ತುತ ಸಂದರ್ಭದಲ್ಲಿ ನಿಸಾರ್ ಅಹ್ಮದ್ ಅವರು ರಚಿಸಿದ ನಿಮ್ಮೊಡನಿದ್ದೂ ನಿಮ್ಮಂತಾಗದೆ ಎನ್ನುವ ಕವನ ಇಂದಿನ ದಿನಮಾನಗಳಲ್ಲಿ ವಾಸ್ತವಕ್ಕೆ ಹತ್ತಿರವಾಗಿದ್ದು, ನಮ್ಮನ್ನಗಲಿದ ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್ ಅವರಿಗೆ ‘ಉತ್ತರ ಪ್ರಭ’ದ ನುಡಿ ನಮನ…

ರಾಜ್ಯ ಕ.ಸಾ.ಪ ಕಾರ್ಯಕಾರಿ ಸಮಿತಿಗೆ ನೇಮಕ.

ಬೆಂಗಳೂರ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಭಾಷೆ,…

ಕೊರೋನಾ ಕಾವ್ಯ-9

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕಾವ್ಯ ಕಳುಹಿಸಿದವರು ಡಾ.ಸಂಗಯ್ಯ ಶೇ ಶಿರೂರಮಠ ಅವರು. ಪುಣೆಯ ಡಿಫೆನ್ಸ್ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಯದ ಗೂಡಿನಲ್ಲಿ ಒಂದಾದ ಜೀವಗಳ ತಲ್ಲಣವನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ.