ಗದಗ: ಯಾರಿಗೆ ಬಂತು? ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ, ಸಿದ್ಧಲಿಂಗಯ್ಯನವರ ಈ ಕವಿತೆ ಕೇಳುತ್ತಲೇ ಅನೇಕರ ಯೋಚನೆ ಅಸ್ಪೃಶ್ಯತೆ ಕಡೆಗೆ ಹೊರಳುತ್ತವೆ. ಅಸ್ಪೃಶ್ಯತೆ ಇನ್ನು ಜೀವಂತವಿರುವ ಇಂತಹ ವರ್ತಮಾನದಲ್ಲಿ ತಹಶೀಲ್ದಾರರೊಬ್ಬರು ಅಸ್ಪೃಶ್ಯತೆ ಬಗ್ಗೆ ಜಾಗೃತಿ ಮೂಡಿಸಲು ದಲಿತರು ಕುಡಿದ ಚಹ ಕಪ್ ತೊಳೆದರೆ? ಎಸ್! ಮುಂಡರಗಿ ತಹಶೀಲ್ದಾರ್ ಆಶಪ್ಪ ಪೂಜಾರ್ ಅವರು ಮಾಡಿದ್ದು ಅದನ್ನೇ.
ನನ್ನ ಕರ್ತವ್ಯ
ಹಾರೋಗೇರಿ ಗ್ರಾಮಕ್ಕೆ ತೆರಳಿದಾಗ ನಡೆದ ಘಟನೆ ಇದು. ಸಮಾಜದ ಸ್ವಾಸ್ಥö್ಯ ಕಾಪಾಡುವ ನಿಟ್ಟಿನಲ್ಲಿ ಒಬ್ಬ ಅಧಿಕಾರಿಯಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಘಟನೆ ನಡೆದು ಎರಡು ದಿನಗಳ ಬಳಿಕ ಈ ವಿಚಾರ ಸಾಮಾಜಿಕ ಜಾಲಾತಾಣದ ಮೂಲಕ ಹೆಚ್ಚು ಜನರಿಗೆ ಗೊತ್ತಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯವಾಗಿದೆ.
-ಆಶಪ್ಪ ಪೂಜಾರ್ ಪೂಜಾರ್, ತಹಶೀಲ್ದಾರ್
ತಾಲೂಕಿನ ಹಾರೋಗೇರಿ ಗ್ರಾಮದಲ್ಲಿರುವ ಅಸ್ಪೃಶ್ಯತೆ ಹೋಗಲಾಡಿಸಲು ತಹಶೀಲ್ದಾರ ನೇತೃತ್ವದಲ್ಲಿ ಜಾಗೃತಿ ಸಭೆ ಕರೆಯಲಾಗಿತ್ತು. ಬರೀ ಭಾಷಣಕ್ಕಷ್ಟೇ ಸೀಮಿತವಾಗದ ಮುಂಡರಗಿ ತಹಶೀಲ್ದಾರ್ ಆಶಪ್ಪ ಪೂಜಾರ್ ಅವರು, ಸಭೆ ಮುಗಿದ ನಂತರ ಹಾರೋಗೇರಿ ಗ್ರಾಮದ ದಲಿತರನ್ನೆಲ್ಲ ಚಹದಂಗಡಿಗೆ ಕರೆದೊಯ್ದರು. ಚಹ ಕುಡಿದವರ ಲೋಟಗಳನ್ನೆಲ್ಲ ತಾವೇ ತೊಳೆಯುವ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಸ್ವತಃ ಪರಿಶಿಷ್ಟ ಜಾತಿ ಜನಾಂಗದವರು ಕುಡಿದ ಚಹಾ ಕಪ್ಪನ್ನು ತೊಳೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದು, ತಹಶೀಲ್ದಾರ್ ಈ ಕಾರ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಅಂಗಡಿ ಬಂದ್ ಮಾಡುತ್ತಿದ್ದರಂತೆ!
ಹಾರೋಗೇರಿ ಗ್ರಾಮದಲ್ಲಿ ಬಹಳ ದಿನಗಳ ಹಿಂದೆ ದಲಿತರಿಗೆ ಚಹಾ ಅಂಗಡಿ ಒಳಗೆ ಪ್ರವೇಶ ಹಾಗೂ ಕ್ಷೌರ ಮಾಡುವುದನ್ನು ನಿಷೇಧಿಸಲಾಗಿತ್ತು. ಪರಿಶಿಷ್ಟ ಜಾತಿಯವರ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ ಊರಲ್ಲಿನ ಚಹಾ ಅಂಗಡಿಗಳನ್ನು ಬಂದ್ ಮಾಡುತ್ತಿದ್ದರು ಎನ್ನಲಾಗಿದೆ.
ಪೂಜಾರ್ ಅವರ ಈ ಕಾರ್ಯ ಸಣ್ಣದಾದರೂ ಅದು ಹಳ್ಳಿಗರ ಮೇಲೆ ಉಂಟು ಮಾಡಿದ ಪರಿಣಾಮ ಸಣ್ಣದಲ್ಲವೇ ಅಲ್ಲ ಎನ್ನಬಹುದು. ಇಷ್ಟೇ ಅಲ್ಲದೆ ನರಗುಂದ ತಹಶೀಲ್ದಾರ ಇದ್ದಾಗಲೂ ಸಹ ಆಶಪ್ಪ ಪೂಜಾರ್ ಅವರು, ಇಂಧನ ಉಳಿತಾಯಕ್ಕೆ ಮನ್ನಣೆ ನೀಡುವ ಉದ್ದೇಶದಿಂದ ಸೈಕಲ್ ಸವಾರಿ ಮಾಡಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು.
ತಹಶೀಲ್ದಾರ್ ಆಶಪ್ಪ ಪೂಜಾರಿ, ಸಿಪಿಐ ಸುಧೀರ್ ಕುಮಾರ್ ಬೆಂಕಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ, ಕಂದಾಯ ನಿರೀಕ್ಷಕ ಎಂ.ಎ.ನದಾಫ್, ಪಿಡಿಒ ಮಹೇಶ್ ಅಲ್ಲಿಪೂರ ಸೇರಿದಂತೆ ಇತರರು ಇದ್ದರು.