ಕಾರಟಗಿ: ನವಲಿ ರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜು ಆವರಣಲ್ಲಿ ಮಾ.7 ರಂದು ನಡೆಯಲಿರುವ ಪ್ರಪ್ರಥಮ ತಾಲೂಕಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇಂಗ್ಲಿಷ್ ಪ್ರಾಧ್ಯಾಪಕ, ಪ್ರಗತಿ ಪರ ಬರಹಗಾರ ಹಾಗೂ ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಪದವಿ ಪೂರ್ವ ಕಾಲೇಜ್ನ ಪ್ರಾಚಾರ್ಯ, ಗೌರವ ಸಂಪಾದಕ ಪ್ರೊ.ಸಿದ್ದು ಯಾಪಲಪರವಿ ಆಯ್ಕೆಯಾಗಿದ್ದಾರೆ.
ಪರಿಷತ್ನ ಜಿಲ್ಲಾಧ್ಯಕ್ಷ ರಾಜಶೇಖರ್ ಅಂಗಡಿ ಮತ್ತು ತಾಲೂಕಾ ಪರಿಷತ್ ಅಧ್ಯಕ್ಷ ಚನ್ನ ಬಸಪ್ಪ ವಕ್ಕಳದ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಸಮ್ಮೇಳನ ಅಧ್ಯಕ್ಷರ ಆಯ್ಕೆ, ಸ್ಥಳ, ದಿನಾಂಕ ನಿಗದಿಗೆ ಸಭೆ ನಡೆಯಿತು.
ತಾಲೂಕಾಧ್ಯಕ್ಷ ವಕ್ಕಳದ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಣ, ಸಾಹಿತ್ಯ ಕ್ಷೇತ್ರಗಳಲ್ಲದೆ ಜೀವನ ಶೈಲಿ ತರಬೇತುದಾರರಾಗಿ ದೇಶ ವಿದೇಶಗಳಲ್ಲಿ ಚಿರಪರಿಚಿತರಾಗಿದ್ದಾರೆ ಎನ್ನುವುದು ಕಾರಟಗಿಯ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಪರಿಷತ್ ಕಾರ್ಯದರ್ಶಿ ಭೀಮಣ್ಣ ಕರಡಿ, ಜಿಲ್ಲಾ ಮಹಿಳಾ ಪ್ರತಿನಿಧಿ ವಿಜಯಲಕ್ಷ್ಮಿ ಮೇಲಿನಮನಿ, ತಾಲೂಕಾ ಮಹಿಳಾ ಪ್ರತಿನಿಧಿ ಸುರೇಖಾ, ಸಂಘ ಸಂಸ್ಥೆ ಪ್ರತಿನಿಧಿ ಬಸವರಾಜ್ ಪಗಡ್ದಿನ್ನಿ, ಮಾಧ್ಯಮ ಪ್ರತಿನಿಧಿ ಶರಣು ಕೋಟ್ಯಾಳ, ಕಾರ್ಯಕಾರಿ ಮಂಡಳಿ ಸದಸ್ಯ ವಡಕ್ಕಣ್ಣನವರ್, ಅಕ್ಕ ಮಹಾದೇವಿ ಶ್ಯಾವಿ ಮುಂತಾದವರು ಉಪಸ್ಥಿತರಿದ್ದರು.