ನಿಂಗಪ್ಪ ಹಮ್ಮಿಗಿ

ಶಿರಹಟ್ಟಿ: ಸಮಸ್ಯೆಗಳ ಸಾಗರವನ್ನೆ ಹೊತ್ತುಕೊಂಡು ನಿಂತ ರಣತೂರು ಗ್ರಾಮಕ್ಕೆ ಜಿಲ್ಲಾಡಳಿತದ ಗ್ರಾಮ ವಾಸ್ತವ್ಯದಿಂದ ಸಮಸ್ಯೆಗಳ ನಿವಾರಣೆಯಾಗಬಹುದೇ ಎಂಬ ತವಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ಸರ್ಕಾರದ ಆದೇಶದಂತೆ ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಮವಾಸ್ತವ್ಯ ಮಾಡುವುದರ ಮೂಲಕ ಗ್ರಾಮದ ಸಮಸ್ಯೆಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಜಿಲ್ಲಾಡಳಿತ ಮೇಲಿದೆ. ಅದೇ ರೀತಿ ಸುಮಾರು 5058 ಜನಸಂಖ್ಯೆ ಹೊಂದಿರುವ ತಾಲೂಕಿನ ರಣತೂರು ಗ್ರಾಮವನ್ನು ಗ್ರಾಮವಾಸ್ತವ್ಯಕ್ಕೆ ಆಯ್ಕೆ ಮಾಡಲಾಗಿದ್ದು, ಅದಕ್ಕೆ ಇಂದು ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಶತಮಾನ ಕಂಡ ಶಾಲೆಯನ್ನು ಮರೆತ ಶಿಕ್ಷಣ ಇಲಾಖೆ

1910 ರಲ್ಲಿಯೇ ರಣತೂರು ಗ್ರಾಮದಲ್ಲಿ ಪ್ರಾರಂಭವಾದ ಪ್ರಾಥಮಿಕ ಶಾಲೆಯನ್ನು ಶಿಕ್ಷಣ ಇಲಾಖೆ ಮರೆತಿದೆ. ಅಲ್ಲಿಂದ ಇಲ್ಲಿಯವರೆಗೂ ಇಲಾಖೆಯ ವತಿಯಿಂದ ಯಾವುದೇ ಅನುದಾನ ದೊರೆತಿಲ್ಲ. ಅಲ್ಲದೆ 2014 ರಲ್ಲಿ ಪ್ರೌಢ ಶಾಲೆ ಮಂಜೂರಾಗಿದ್ದರೂ, ಇಲ್ಲಿಯವರೆಗೆ ಸ್ವಂತ ಕಟ್ಟಡವಿಲ್ಲದೆ ತರಗತಿಗಳು ಇದೇ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿವೆ. ಅಲ್ಲದೆ ಕೇವಲ 4 ಜನ ಶಿಕ್ಷಕರು ಪಾಠ ಬೋಧನೆ ನಡೆಸುತ್ತಿರುವುರಿಂದ ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ. ಸದ್ಯ ಇರುವ ಶಾಲಾ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿದ್ದು, ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಗ್ರಾಮದ ಶಾಲೆಗಳನ್ನು ನಿರ್ಲಕ್ಷಿಸುತ್ತಿದೆ ಎನ್ನುವುದು ಗ್ರಾಮಸ್ಥರ ಆರೋಪ.

ಸ್ಮಶಾನವಿಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು

ಸತ್ತ ಮೇಲೆ ಮುಕ್ತಿ ನೀಡಲು, ಶವ ಸಂಸ್ಕಾರ ಮಾಡಿ ಹೂಳಲು ಗ್ರಾಮದಲ್ಲಿ ಸ್ಮಶಾನವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷದಲ್ಲಿ ಗ್ರಾಮದ ರೈತರೊಬ್ಬರನ್ನು ಮನವೊಲಿಸಿ ರುದ್ರಭೂಮಿಗೆ ಹಳ್ಳದ ಪಕ್ಕದಲ್ಲಿ 2 ಎಕರೆ ಜಮೀನು ಗೊತ್ತುಪಡಿಸಲಾಗಿತ್ತು. ಆದರೆ ಆವಾಗ ಇದ್ದ ಆಡಳಿತ ಮಂಡಳಿಯಿಂದಲೋ ಅಥವಾ ಅಧಿಕಾರಿಗಳಿಂದಲೋ ಅದು ಖರೀದಿ ಆಗಿಲ್ಲ. ಸದ್ಯ ಗ್ರಾಮಕ್ಕಿರುವ ಮೂಲ ಸಮಸ್ಯೆಯಲ್ಲಿ ಇದು ಮುಖ್ಯವಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಸಾರಿಗೆಯ ಇಲಾಖೆಯ ನಿರ್ಲಕ್ಷ್ಯ

ಗ್ರಾಮಕ್ಕೆ ಸರಿಯಾದ ಬಸ್ ಸೌಲಭ್ಯವಿಲ್ಲ. ದಿನಕ್ಕೆ ಕೇವಲ 4 ಸಾರಿ ಮಾತ್ರ ಬಸ್ ಸಂಚರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗಂತೂ ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಅಲ್ಲದೆ ಗ್ರಾಮದ ವೃದ್ದರೂ, ಹೆಣ್ಣುಮಕ್ಕಳು ಬಸ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದು, ದೇವಿಹಾಳದಿಂದ ಪಾದಯಾತ್ರೆ ಬೆಳಿಸಿ ಗ್ರಾಮಕ್ಕೆ ಬರುವ ದುಸ್ಥಿತಿ ಗ್ರಾಮಸ್ಥರಿಗೆ ಬಂದೊದಗಿದೆ. ಬಸ್ ಸಂಚರಿಸುವ ಅವಕಾಶಗಳಿದ್ದರೂ ಸಾರಿಗೆ ಇಲಾಖೆ ಮಾತ್ರ ನಿರ್ಲಕ್ಷ್ಯ ಧೊರಣೆ ಅನುಸರಿಸುತ್ತಿದೆ ಎಂಬುದು ಗ್ರಾಮಸ್ಥರ ವಾದ.

ವಸತಿ ಯೋಜನೆ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿಯಲ್ಲಿ ಸುಮಾರು 572 ಅರ್ಜಿ ಸ್ವೀಕೃತವಾಗಿದ್ದು, ಇದಕ್ಕೆ ನಿವೇಶನದ ಕೊರತೆಯಿದೆ. ಆಶ್ರಯ ಮನೆಯ ಯೋಜನೆಗೆ ಗ್ರಾಮದ ರೈತರೊಬ್ಬರ 10 ಎಕರೆ ಜಮೀನು ಖರೀದಿಸಲು ಪ್ರಪೋಸಲ್ ಕಳುಹಿಸಲಾಗಿತ್ತು. ಆದರೆ ಸಂಬಂಧಪಟ್ಟ  ಅಧಿಕಾರಿಗಳ ಸ್ಥಳ ಪರಿಶೀಲನೆಯಲ್ಲಿ ಅದು ವಸತಿಗೆ ಯೋಗ್ಯವಾದ ಭೂಮಿ ಅಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅದರ ಪಕ್ಕದ ಜಮೀನನ್ನು ವೀಕ್ಷಣೆ ಮಾಡಿ ಖರೀದಿಸಿದರೆ ಜನರಿಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆ ಗ್ರಾಮಸ್ಥರದ್ದು. ಇಂತಹ ಜ್ವಲಂತ ಸಮಸ್ಯೆಗಳು ಸೇರಿದಂತೆ  ಅನೇಕ ತೊಂದರೆಗಳನ್ನು ಗ್ರಾಮಸ್ಥರು ಅನುಭವಿಸುತ್ತಿದ್ದಾರೆ. ಸದ್ಯ ಈ ಗ್ರಾಮ ವಾಸ್ತವ್ಯದಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಬಕ ಪಕ್ಷಿಗಳಂತೆ ಗ್ರಾಮಸ್ಥರು ಕಾದು ಕುಳಿತಿದ್ದಾರೆ. ಜಿಲ್ಲಾಡಳಿತದ ನೇತ್ರತ್ವದ ತಾಲೂಕಾಡಳಿತದ ಸಮ್ಮುಖದಲ್ಲಿ ನಡೆಯುವ ಈ ವಾಸ್ತವ್ಯದಲ್ಲಿ ಪ್ರಾಮಾಣಿಕವಾಗಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಒದಗಲಿ ಎಂಬುದು ಉತ್ತರಪ್ರಭದ ಆಶಯ.

Leave a Reply

Your email address will not be published. Required fields are marked *

You May Also Like

ಕೆಪಿಎಸ್ಇ ಪರೀಕ್ಷೆ ಬರೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಈಗಾಗಲೇ ಜನೇವರಿ ತಿಂಗಳಲ್ಲೆ ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯ (ಕೆಪಿಎಸ್ಇ) ಪರೀಕ್ಷೆಯನ್ನು ಫೆ.28ಕ್ಕೆ ನಿಗಧಿ ಪಡಿಸಲಾಗಿದೆ.

ಹರ್ನಾಜ್ ಕೌರ್ ಸಂಧು 2021ರ ನೂತನ ವಿಶ್ವ ಸುಂದರಿ!

ಉತ್ತರಪ್ರಭ ದೆಹಲಿ: 2021ರ 70ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು…

ಗದಗ ಜಿಲ್ಲೆಯಲ್ಲಿ ಕೊರೊನಾ ಭಯ!: ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆಯಾ ಜಿಮ್ಸ್..!

ಗದಗ: ನಿನ್ನೆ ರಾತ್ರಿಯಿಂದಲೇ ಕೊರೊನಾ ಪಾಸಿಟಿವ್ ಎಂದು 30 ಸೊಂಕಿತರ ಲೀಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ…

ರಾಜಕೀಯ ಒಳ ಸಂಚಿನಿಂದಾಗಿ ವಿನಯ್ ಕುಲಕರ್ಣಿಯನ್ನು ವಿಚಾರಣೆಗೊಳಪಡಿಸಲಾಗುತ್ತಿದೆ – ಪಂಚಮಸಾಲಿ ಪೀಠದ ಶ್ರೀ!

ಹುಬ್ಬಳ್ಳಿ : ಜಿಪಂನ ಮಾಜಿ ಸದಸ್ಯ ಯೋಗೇಶ್ ಗೌಡ ಗೌಡರ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೀಗಾಗಿ ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.