ಗಜೇಂದ್ರಗಡ: ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆ, ಪೆಟ್ರೋಲ್-ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪಟ್ಟಣದಲ್ಲಿ 400ಕ್ಕೂ ಅಧಿಕ ಟ್ರಾಕ್ಟರ್ ರ್ಯಾಲಿ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ದಿಂದ ಪ್ರತಿಭಟನೆ ನಡೆಸಲಾಯಿತು. ಈ ಮೂಲಕ ಮೋದಿ ಸರ್ಕಾರದ ವಿರುದ್ಧ ರಣ ಕಹಳೆ ಮೊಳಗಿಸಿದರು.
ತಾಲೂಕಿನ ಹಲವಾರು ಗ್ರಾಮಗಳಿಂದ ಆಗಮಿಸಿದ್ದ ನೂರಾರು ಟ್ರಾಕ್ಟರ್ಗಳನ್ನು ಎಪಿಎಂಸಿ ಆವರಣದಲ್ಲಿನ ಬಯಲು ಜಾಗೆಯಲ್ಲಿ ಜಮಾವಣೆ ಮಾಡಲಾಗಿತ್ತು. ಬೃಹತ್ ಟ್ರಾಕ್ಟರ್ ರ್ಯಾಲಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ ಚಾಲನೆ ನೀಡುತ್ತಿದ್ದಂತೆ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುವ ಮೂಲಕ ರ್ಯಾಲಿ ಆರಂಭಿಸಿದರು.
ಎಪಿಎಂಸಿ ಯಿಂದ ರ್ಯಾಲಿ ಆರಂಭಸಿ, ಶ್ರೀ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ಹಿರೇಬಜಾರ, ಕಟ್ಟಿಬಸವೇಶ್ವರ ರಂಗ ಮಂದಿರ, ಕೊಳ್ಳಿಯವರ ಕತ್ರಿ, ಬಸವೇಶ್ವರ ವೃತ್ತದ ಮೂಲಕ ಸಂಚರಿಸಿ ಬಹಿರಂಗ ಸಭೆಗೆ ತಲುಪಿತು.
ಟ್ರಾಕ್ಟರ್ ಏರಿದ ಜಿಎಸ್ಪಿ
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಟ್ರಾಕ್ಟರ್ ರ್ಯಾಲಿಯಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ ಮೆರವಣಿಗೆ ಯುದ್ದಕ್ಕೂ ಟ್ರಾಕ್ಟರ್ ಚಲಿಸುತ್ತಾ ಕೇಂದ್ರದ ವಿರುದ್ಧ ಘೋಷಣೆ ಕೂಗಿ ಸಾಗಿದರು.
ಟ್ರಾಕ್ಟರ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕೃತಿ, ಅಡುಗೆ ಅನಿಲದ ಗ್ಯಾಸಗಳನ್ನು ಟ್ರಾಕ್ಟರ್ಗಳಲ್ಲಿ ಇಟ್ಟುಕೊಂಡು ಮೆರವಣಿಗೆ ನಡೆಸಿದರು.
ಗಜೇಂದ್ರಗಡ ಸೇರಿದಂತೆ ಹಲವಾರು ಗ್ರಾಮಗಳಿಂದ 400ಕ್ಕೂ ಅಧಿಕ ಟ್ರಾಕ್ಟರ್ಗಳು ಗಜೇಂದ್ರಗಡಕ್ಕೆ ಲಗ್ಗೆ ಇಟ್ಟಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ರ್ಯಾಲಿಯಲ್ಲಿ ಮಹಿಳಾ ಕಾರ್ಯಕರ್ತರು ಭಿತ್ತಿಪತ್ರ ಹಿಡಿದು, ಅಡುಗೆ ಅನಿಲ ದರ ಹೆಚ್ಚಳ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಹಿಡಿಶಾಪ ಹಾಕಿದರು.
ಕೋಟೆ ನಾಡಿನಲ್ಲಿ ಕೈ ರಣಕಹಳೆ
ಕೋಟೆ ನಾಡಿನಲ್ಲಿ ಕಾಂಗ್ರೆಸ್ ಪಕ್ಷ ಐತಿಹಾಸಿಕ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ವಿಶೇಷವಾಗಿತ್ತು. ಪ್ರತಿಭಟನಾ ಮೆರವಣಿಗೆಯುದ್ಧಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು.