ಬೆಂಗಳೂರು: ಸಮಾಜವನ್ನು ಒಡೆಯುವ ಸಂಸ್ಕೃತಿ ತಮ್ಮದಲ್ಲ. ನಾವು ಬೆಂಕಿ ಹಚ್ಚುವವರಲ್ಲ. ಹಚ್ಚಿದ ಬೆಂಕಿಯನ್ನು ಆರಿಸುವವರು ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಕೇಸರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜಧಾನಿಯಲ್ಲಿಂದು ತುರ್ತು ಸುದ್ದಿಗೋಷ್ಟಿ ನಡೆಸಿದ ಅವರು ರಾಮನ ಹೆಸರಿನಲ್ಲಿ ನಡೆಯುತ್ತಿರುವ ದೇಣಿಗೆ ವಸೂಲಿಯ ಲೆಕ್ಕ ಕೊಡಿ ಎಂದು ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರಿಗೆ ಆಗ್ರಹಿಸಿದ್ದಾರೆ.
ತಾವು ರಾಮನ ವಿರೋಧಿಯಲ್ಲ, ರಾಮಮಂದಿರ ಕಟ್ಟಲು ಸಹ ತಮ್ಮ ವಿರೋಧವಿಲ್ಲ. ಆದರೆ ರಾಮನ ಹೆಸರಿನಲ್ಲಿ ದೇಣಿಗೆ ಸಂಗ್ರಹ ಎಗ್ಗಿಲ್ಲದೇ ನಡೆಯುತ್ತಿದೆ. ಇದು ಧಾರ್ಮಿಕ ಭ್ರಷ್ಟಾಚಾರ ಎಂದು ಎಚ್ ಡಿಕೆ ಕಿಡಿ ಕಾರಿದ್ದಾರೆ. ಬೀದಿ ಬೀದಿಗಳಲ್ಲಿ ಪುಂಡ-ಪೋಕರಿಗಳೆಲ್ಲಾ ದೇಣಿಗೆ ಹೆಸರಲ್ಲಿ ಚಂದಾ ಎತ್ತುತ್ತಿದ್ದಾರೆ. ಇದರ ಲೆಕ್ಕ ಕೊಡುವವರು ಯಾರು. ಸರ್ಕಾರ ಹಾಗೂ ಇತರ ಕಡೆಗಳಿಂದ ಅನುದಾನ ಪಡೆಯುವ ಎನ್ ಜಿಓಗಳು ಸಹ ವಾರ್ಷಿಕವಾಗಿ ದೇಣಿಗೆ ಪಡೆದ ವಿವರವನ್ನು ಸರ್ಕಾರಕ್ಕೆ ಸಲ್ಲಿಸುತ್ತವೆ. ಶ್ರೀರಾಮನ ಹೆಸರಿನಲ್ಲಿ ನಡೆಯುತ್ತಿರುವ ದೇಣಿಗೆ ಸಂಗ್ರಹದ ಲೆಕ್ಕ ಕೇಳಬಾರದೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ದೇಣಿಗೆ ನೆಪದಲ್ಲಿ ಹಣ ದುರ್ಬಳಕೆಯಾಗ್ತಿದೆ. ಅಷ್ಟಕ್ಕೂ ಹಣ ಪಡೆದ ಮನೆಗಳ ಮೇಲೆ ಸ್ಟಿಕ್ಕರ್ ಅಂಟಿಸುತ್ತಿರುವುದು ಏಕೆ ಎಂದು ಎಚ್ ಡಿಕೆ ಪ್ರಶ್ನೆ ಮಾಡಿದ್ದಾರೆ. ತಮ್ಮ ಮನೆಗೂ 25 ಜನ ಕೇಸರಿ ಕಾರ್ಯಕರ್ತರು ಬಂದಿದ್ದರು. ಹಣ ನೀಡುವಂತೆ ಕೇಳಿಕೊಂಡರು. ರಾಮಮಂದಿರ ರಾಷ್ಟ್ರದ ಏಕತೆ ಪ್ರತೀಕ ಎಂದು ಬೆದರಿಕೆ ಹಾಕುವ ರೀತಿಯಲ್ಲೇ ದೇಣಿಗೆ ಕೇಳಿದರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಪಾರದರ್ಶಕ ರೀತಿಯಲ್ಲಿ ಹಣ ಪಡೆದರೇ ಯಾರ ಅಭ್ಯಂತರವೂ ಇರುವುದಿಲ್ಲ. ಆದರೆ ಡಿಜಿಟಲ್ ಯುಗದಲ್ಲೂ ಬೀದಿ ಬೀದಿ ಸುತ್ತಿ ರಸೀದಿ ನೀಡಿ ದೇಣಿಗೆ ಪಡೆಯುವ ದರ್ದು ಏಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ತಾವು ಯಾವ ಸಂಘಟನೆಗಳ ಮೇಲೂ ಆರೋಪ ಹೊರಿಸುತ್ತಿಲ್ಲ. ಆದರೆ ದೇಣಿಗೆ ಸಂಗ್ರಹ ಎನ್ನುವುದು ಪಾರದರ್ಶಕವಾಗಿ ನಡೆಯಬೇಕು ಎನ್ನುದಷ್ಟೇ ನಮ್ಮ ಆಗ್ರಹ. ಬಡ ಬಗ್ಗರ ದುಡ್ಡು ಕಂಡವರ ಪಾಲಾಗಬಾರದು ಎನ್ನುವುದಷ್ಟೇ ತಮ್ಮ ನಿಲುವು. ಒಂದು ವೇಳೆ ಸರಿಯಾದ ವ್ಯಕ್ತಿ ಬಂದು ಕೇಳಿದರೆ ತಾವು ಸಹ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಇತ್ತ ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಮಂದಿರಕ್ಕಾಗಿ ಯಾರಿಂದಲೂ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ. ಎಲ್ಲವೂ ಪಾರದರ್ಶಕ ವ್ಯವಸ್ಥೆಯಲ್ಲೇ ನಡೆಯುತ್ತಿದೆ. ದೇಣಿಗೆ ನೀಡದ ಕುಟುಂಬಗಳ ಮಾರ್ಕಿಂಗ್ ನಡೆಯುತ್ತಿಲ್ಲ. ಇದು ಶುದ್ಧ ಸುಳ್ಳು ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ. ಒಟ್ಟಿನಲ್ಲಿ ರಾಮಮಂದಿರ ದೇಣಿಗೆ ವಿಚಾರ ಇದೀಗ ರಾಜಕೀಯ ಕೆಸರೆರಚಾಟಕ್ಕೆ ದಾರಿಯಾಗಿದ್ದು, ಹಿಂದೂ ಮತಗಳ ಕ್ರೋಡಿಕರಣಕ್ಕೆ ಕೇಸರಿ ಈ ದಾಳ ಪ್ರಯೋಗಿಸುತ್ತಿದೆ ಎನ್ನುವ ಗುಮಾನಿಯನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.