ಹೊಸದುರ್ಗ: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಹಕ್ಕೊತ್ತಾಯಕ್ಕಾಗಿ ಪಟ್ಟಣದಲ್ಲಿ ಬುಧವಾರ ನಡೆದ ಬೃಹತ್ ಹೋರಾಟದ ಮೆರವಣಿಗೆಯಲ್ಲಿ ತಾಲ್ಲೂಕಿನ ಮುಸ್ಲಿಂ, ಜೈನ, ಕ್ರಿಶ್ಚಿಯನ್, ವೀರಶೈವ ಲಿಂಗಾಯತ, ಕುರುಬ, ನಾಯಕ ಸೇರಿ ಎಲ್ಲಾ ಧರ್ಮ, ಜಾತಿಯ ಮುಖಂಡರು ಭಾಗವಹಿಸಿ ದೇವಾಂಗ ಸಮಾಜಕ್ಕೆ ಬೆಂಬಲ ವ್ಯಕ್ತಪಡಿಸಿದರು.
ದೇವಮಾನವ ಕುಲದ ಘನತೆ, ಗೌರವ ಹೆಚ್ಚಿಸಲು ಬಟ್ಟೆ ನೇಯ್ದು ಕೊಟ್ಟಿರುವ ದೇವಾಂಗ ಜನರು ಶಾಂತಿ ಪ್ರಿಯರು, ಸೌಮ್ಯವಾದಿಗಳು. ಅವರು ಉಳಿದೆಲ್ಲಾ ಧರ್ಮ, ಜಾತಿಯವರ ಜೊತೆಗೆ ಸ್ನೇಹದಿಂದ ಬದುಕುತ್ತಿದ್ದು, ಮಾದರಿಯಾಗಿದ್ದಾರೆ. ಆದರೆ, ಅತ್ಯಂತ ಹಿಂದುಳಿದಿರುವ ಇಂತಹ ಸಮುದಾಯ ಮುಖ್ಯವಾಹಿನಿಗೆ ಬರಬೇಕಾದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದಡಿ ಈ ಸಮುದಾಯಕ್ಕೆ ಶೀಘ್ರ ಶೇ 2 ರಷ್ಟು ವಿಶೇಷ ಮೀಸಲಾತಿ ಕೊಡಬೇಕು.
ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒಕ್ಕೊರಲಿನಿಂದ ಸರ್ಕಾರಕ್ಕೆ ಮನವಿ ಮಾಡಿದರು. ಹುಳಿಯಾರು ರಸ್ತೆಯಲ್ಲಿರುವ ಬನಶಂಕರಿ ಸಮುದಾಯ ಭವನದಿಂದ ಹೊರಟದ ಮೆರವಣಿಗೆಗೆ ಹಂಪಿ ಹೇಮಕೂಟ ಗಾಯಿತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ಚಾಲನೆ ನೀಡಿ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಹೊಸದುರ್ಗದಲ್ಲಿ ನಾವು ಸಾಂಕೇತಿಕವಾಗಿ ಮಾಡಿದ ಹೋರಾಟಕ್ಕೆ ನಮ್ಮ ನಿರೀಕ್ಷೆಗೂ ಮೀರಿ ಜನಸ್ತೋಮ ಸೇರಿದೆ. ಹಾಗೆಯೇ ತಾಲ್ಲೂಕಿನ ಮಾಜಿ ಶಾಸಕರು, ಎಲ್ಲ ಸಮುದಾಯದ ಮುಖಂಡರು ಸುಡುಬಿಸಿಲನ್ನು ಲೆಕ್ಕಿಸದೇ ಬಂದು ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ಸಂತಸ ತಂದಿದೆ. ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ನಾವು ಯಾವುದೇ ಸೌಲಭ್ಯ ಪಡೆಯಲು ಹೋರಾಟ ಮಾಡಿರಲಿಲ್ಲ. ಈಗ ಸರ್ಕಾರ ಹೋರಾಟ ಮಾಡುವಂತೆ ಮಾಡಿದೆ. ಹಾಗಾಗಿ ನಮ್ಮ ಎರಡು ಬೇಡಿಕೆಯನ್ನು ಸರ್ಕಾರ ಈಡೇರಿಸುವ ವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.
ನಂತರ ದಯಾನಂದಪುರಿ ಸ್ವಾಮೀಜಿ ಹಾಗೂ ಸಮಾಜದ ಮುಖಂಡರು ತಹಶೀಲ್ದಾರ್ ವೈ. ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ರಾಜ್ಯ ಸರ್ಕಾರ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ಶೇ ೨ರಷ್ಟು ವಿಶೇಷ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಮಾಜಿ ಶಾಸಕರಾದ ಬಿ.ಜಿ. ಗೋವಿಂದಪ್ಪ, ಇಲ್ಕಲ್ ವಿಜಯಕುಮಾರ್ ಸಮಾಜದ ಬೇಡಿಕೆಗೆ ಸಾಥ್ ನೀಡಿದರು.
ಸಮುದಾಯದ ಅಭಿವೃದ್ಧಿಗೆ ಸರ್ಕಾರಕ್ಕೆ ಒತ್ತಾಯಿಸಿರುವ ಬೇಡಿಕೆ ಈಡೇರಿಸದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಬೇಡಿಕೆ ಈಡೇರುವವರೆಗೂ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೊಸದುರ್ಗ ದೇವಾಂಗ ಸಮಾಜದ ಅಧ್ಯಕ್ಷ ಡಿ.ಆರ್. ಗೋವಿಂದರಾಜು ಎಚ್ಚರಿಕೆ ನೀಡಿದರು.
ನಾವು ಎಲ್ಲರಂತೆ ಈ ರಾಜ್ಯದ ಪ್ರಜೆಗಳಾಗಿದ್ದು, ಇತರೆ ಸಮಾಜದವರಂತೆ ಸಾಮಾಜಿಕ ನ್ಯಾಯದಡಿ ನಮಗೂ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಎಂದು ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಹೋರಾಟ ಸಮಿತಿ ರಾಜ್ಯ ಸಂಚಾಲಕ ಡಾ.ಜಿ. ರಮೇಶ್ ಆಗ್ರಹಿಸಿದರು.