ಲಕ್ಷ್ಮೇಶ್ವರ: ತಾಲೂಕಿನ ಫು.ಬಡ್ನಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಸತತವಾಗಿ ಮೂರನೇ ಬಾರಿ ಅಧ್ಯಕ್ಷರಾಗಿ ಮಾಜಿ ಶಾಸಕ ಎಸ್.ಎನ್.ಪಾಟೀಲ ಅವರ ಪುತ್ರ ಸತೀಶಗೌಡ ಎಸ್.ಪಾಟೀಲ್ ಹಾಗು ಉಪಾಧ್ಯಕ್ಷರಾಗಿ ಲೋಹಿತಪ್ಪ ಮರಿಹೊಳಲಣ್ಣವರ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಜರುಗಿದ ಚುನಾವಣೆಯಲ್ಲಿ ಆಯ್ಕೆಯಾ ಅಧ್ಯಕ್ಷ ಉಪಾಧ್ಯಕ್ಷರನ್ನು ಸಂಘದ ಸದಸ್ಯರು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಸ್.ಎನ್.ಪಾಟೀಲ್, ಸಹಕಾರಿ ರಂಗಕ್ಕೆ ಜಿಲ್ಲೆಯ ಕೊಡುಗೆ ಇಡಿ ದೇಶಕ್ಕೆ ಅಪಾರವಾಗಿದೆ. ಸಹಕಾರಿ ತತ್ವದ ತಳಹದಿ ಜಿಲ್ಲೆಯ ಮಣ್ಣಿನಿಂದಲೆ ಆರಂಭವಾಗಿದ್ದು, ಎಲ್ಲರೂ ಸಹಕಾರಿ ರಂಗದ ತತ್ವವನ್ನು ಅಳವಡಿಸಿಕೊಂಡು ರಾಜಕೀಯ ರಹಿತವಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. ಸಹಕಾರಿ ಸಂಘಗಳು ಜಿಲ್ಲಾ ಬ್ಯಾಂಕು ಮತ್ತು ರೈತರ ಮಧ್ಯ ಕೊಂಡಿಯಾಗಿ ಸೇವೆ ಮಾಡಬೇಕು. ಸರಕಾರ ಸಾಕಷ್ಟು ಯೋಜನೆಗಳನ್ನು ಸಹಕಾರಿ ರಂಗದ ಮೂಲಕವೇ ಜಾರಿಗೊಳಿಸುತ್ತಿದ್ದು ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಹಿರಿಯ ಮುಖಂಡ ವಿ.ಜಿ.ಪಡಗೇರಿ ಮಾತನಾಡಿ, ಸಣ್ಣ ವಯಸ್ಸಿನಲ್ಲೇ ಸಹಕಾರಿ ರಂಗದಲ್ಲಿ ಗುರಿತಿಸಿಕೊಂಡು ಸ್ವಚ್ಛ ದಕ್ಷ ಪ್ರಾಮಾಣಿಕ ಆಡಳಿತ ನೀಡುತ್ತಿರುವುದರಿಂದ ಯುವಕನಾದರೂ ಸಂಘದ ನಿರ್ದೇಶಕಗಳು ಸತತ ಮೂರನೇ ಬಾರಿ ಸತೀಶಗೌಡ ಅವರನ್ನು ಆಯ್ಕೆಮಾಡುತ್ತಿರುವುದು ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಮಗೇರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶೇಖಣ್ಣ ಕಾಳೆ, ನಿರ್ದೇಶಕರಾದ ಹೊನ್ನಪ್ಪ ತಳವಾರ, ಹಾಲಪ್ಪ ಸೂರಣಗಿ, ಬಸವಂತಪ್ಪ ಜಲ್ಲಿಗೇರಿ, ಪಂಚಯ್ಯ ಪುರಾಣಿಕಮಠ, ಮಂಜಪ್ಪ ಕುಂಬಾರ, ಸೋಪಾನ ಮಾಳವದಕರ, ಹಸನಸಾಬ ಬಾವಿಕಟ್ಟಿ, ನೀಲಪ್ಪ ಮಾದರ, ಪಾರವ್ವ ಪಾಟೀಲ್, ಮಮತಾಜಬಿ ನಧಾಪ ಸೇರಿದಂತೆ ಅನೇಕರು ಇದ್ದರು. ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶಪ್ಪ ಹರದಗಟ್ಟಿ ನಿರ್ವಹಿಸಿದರು.