ಗದಗ: ಬ್ಯಾಂಕಿಗೆ ಹಣ ಕಟ್ಟಿಬಾ ಅಂತಾ ಕಳಿಸಿದ ಮಾಲಿಕನ ಲಕ್ಷಾಂತರ ರೂಪಾಯಿಯೊಂದಿಗೆ ಕೆಲಸಗಾರ ನಾಪತ್ತೆಯಾಗಿದ್ದಾನೆ ಎನ್ನುವ ಆರೋಪ ಗದಗ ನಗರದಲ್ಲಿ ಕೇಳಿ ಬಂದಿದೆ.
ಮೂಲತ: ರಾಜಸ್ಥಾನ ನಿವಾಸಿ ರಾಮಸಿಂಗ್ ಗದಗ ನಗರದಲ್ಲಿ ಜೈನ್ ಟ್ರೇಡರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ. ಜೈನ್ ಟ್ರೇಡರ್ಸ್ ಮಾಲಿಕ ವಿಕಾಸ, ಅವರ ವಿಶ್ವಾಸ ಗಳಿಸಿದ್ದ. ಹೀಗಾಗಿ ಟ್ರೇಡರ್ಸ್ ನ ವ್ಯಾಪಾರ ವಹಿವಾಟಿನ ಜವಾಬ್ದಾರಿಯನ್ನು ರಾಮಸಿಂಗ್ ರಜಪುತನಿಗೆ ವಹಿಸಿದ್ದರು. ಕಳೆದ ಎರಡ್ಮೂರು ತಿಂಗಳಿಂದ ಚನ್ನಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದನಂತೆ. ಆದರೆ ಡಿಸೆಂಬರ್ 30 ರಂದು ವ್ಯಾಪಾರವಾಗಿದ್ದ 7 ಲಕ್ಷ ರೂಪಾಯಿ ಹಣವನ್ನು ಬ್ಯಾಂಕಿಗೆ ಹೋಗಿ ಕಟ್ಟಲು ವಿಕಾಸ್ ಜೈನ್ ಹೇಳಿದ್ದಾರೆ. ಇನ್ನೋರ್ವ ಕಾರ್ಮಿಕ ಇಮಾಮಸಾಬ್ ಬಿಂಕದಕಟ್ಟಿ ಹಾಗೂ ರಾಮಸಿಂಗ್ ರಜಪುತ ಇಬ್ಬರು ಸೇರಿಕೊಂಡು ಬೈಕ್ ಮೇಲೆ ಬ್ಯಾಂಕಿಗೆ ಬಂದಿದ್ದಾರೆ. ಗದಗ-ಪಾಲಾ ಬದಾಮಿ ರಸ್ತೆಯಲ್ಲಿರುವ ಎಕ್ಸಿಸ್ ಬ್ಯಾಂಕ್ ಬಳಿ ಬೈಕ್ ನಿಲ್ಲಿಸಿ, ಇಮಾಮಸಾಬ್ ಬಿಂಕದಕಟ್ಟಿ, ಬ್ಯಾಂಕ್ ಸ್ಟೆಂಟಮೆಂಟ್ ತರಲು ಒಳಗೆ ಹೋಗಿದ್ದಾನೆ. ಹೊರಗಡೆ ಬಂದು ನೋಡಿದರೆ ಏಳು ಲಕ್ಷ ರೂಪಾಯಿ ಹಣ ಹಾಗೂ ಬೈಕ್ ಸಮೇತವಾಗಿ ಪರಾರಿಯಾಗಿದ್ದಾನೆ. ಈ ಬಗ್ಗೆ ಮಾಲಿಕ ವಿಕಾಸ್ ಅವರಿಗೆ ಮಾಹಿತಿ ನೀಡಿದ್ದಾನೆ.
ಈತ ಹಣವನ್ನು ತೆಗೆದುಕೊಂಡು ಹೋದ ಮೇಲೆ ರಾಜಸ್ಥಾನ ರಾಜ್ಯದ, ಶಿವಾನಜಿ ಗ್ರಾಮದಲ್ಲಿ ವಾಸವಾಗಿರುವ ರಾಮಸಿಂಗ್ ರಜಪುತ ಅವರ ಪೋಷಕರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದಾರೆ. ಆದರೆ ರಾಮಸಿಂಗ್ ಪೋಷಕರು ಇಲ್ಲಿಗೆ ಬಂದಿಲ್ಲಾ ಎಂದು ಹೇಳಿದ್ದಾರೆ. ವಿಶ್ವಾಸದಿಂದ ಆತ ಬರುತ್ತಾನೆ ಎಂದು ಸ್ವಲ್ಪ ದಿನ ಕಾದು ನೋಡಿದ್ದಾರೆ. ಯಾವಾಗ ಆತ ಬರುವ ಲಕ್ಷಣಗಳು ಕಾಣಲಿಲ್ಲವೋ ಆಗ ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.