ಗದಗ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡಪರ ಹೋರಾಟಗಾರರ ಬಗ್ಗೆ ಕೀಳಾಗಿ ಮಾತನಾಡಿರುವುದನ್ನು ಖಂಡಿಸಿ ನಗರದ ಗಾಂಧಿ ವೃತ್ತದಲ್ಲಿಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್.ಸೋಂಪೂರ ಮಾತನಾಡಿ, ಹೋರಾಟಗಾರರ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ಶಾಸಕ ಯತ್ನಾಳ್ ಕನ್ನಡಿಗರನ್ನು ಅವಮಾನಿಸಿದ್ದಾರೆ. ಸ್ವತ ಮುಖ್ಯಮಂತ್ರಿಗಳನ್ನು ಬ್ಲ್ಯಾಕ್ ಮೇಲೆ ಮಾಡುವ ರೀತಿಯಲ್ಲೂ ಮಾತನಾಡುತ್ತಾರೆ. ಹೀಗಾಗಿ ಇಂತಹ ಶಾಸಕರಿಂದ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು. ಹೀಗಾಗಿ ಯತ್ನಾಳ್ ಅವರಂಥ ಕನ್ನಡ ವಿರೋಧಿ ಶಾಸಕ ಈ ರೀತಿ ಮಾತನಾಡಿದರೆ ವಿಧಾನಸೌಧಕ್ಕೂ ಕಾಲಿಡುವುದು ಕಷ್ಟಕರವಾಗುತ್ತದೆ. ಇದೀಗ ಕರವೇ ಸಾಂಕೇತಿಕ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡುತ್ತಿದೆ. ಕೂಡಲೇ ಶಾಸಕ ಸ್ಥಾನಕ್ಕೆ ಯತ್ನಾಳ್ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ ಮಾತನಾಡಿ, ನೆಲ ಜಲಕ್ಕಾಗಿ ಕರವೇ ನಿರಂತರ ಹೋರಾಟ ಮಾಡುತ್ತಲೇ ಇದೆ. ಒಂದು ವೇಳೆ ಕರವೇ ಕನ್ನಡಕ್ಕಾಗಿ ನಿರಂತರವಾಗಿ ಹೋರಾಟ ಮಾಡದೇ ಇದ್ದಿದ್ದರೇ ಇಷ್ಟೊತ್ತಿಗಾಗಲೇ ಬೆಳಗಾವಿ ಸ್ಥಳೀಯ ಸಂಸ್ಥೆ ಮರಾಠಿಗರ ಪಾಲಾಗುತ್ತಿತ್ತು. ಈ ಬಗ್ಗೆ ಶಾಸಕ ಯತ್ನಾಳ್ ಯೋಚಿಸಿ ಮಾತನಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರತಿಭಟನಾಕಾರರು ಗಾಂಧಿ ವೃತ್ತದಲ್ಲಿ ಶಾಸಕ ಯತ್ನಾಳ ಭೂತ ದಹನಕ್ಕೆ ಮುಂದಾದರು. ಆದರೆ ಇದಕ್ಕೆ ಪೊಲೀಸರು ಅಡ್ಡಿಪಡಿಸಿದರು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಇದರಿಂದ ಪೊಲೀಸ್ ಅಧಿಕಾರಿಗಳು ಹಾಗೂ ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಕೈಗೊಂಬೆಯಂತೆ ಪೊಲೀಸರ ವರ್ತನೆ ಮಾಡುತ್ತಿದ್ದಾರೆ ಅಂತ ಕಿಡಿಕಾರಿದರು. ಸರ್ಕಾರ ಕನ್ನಡ ವಿರೋಧಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ರಾಜಿನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಉಪಾಧ್ಯಕ್ಷ ಶರಣಪ್ಪ ಪುರ್ತಗೇರಿ, ಯುವ ಘಟಕದ ಅಧ್ಯಕ್ಷ ನಿಂಗನಗೌಡ ಮಾಲೀಪಾಟೀಲ್, ನೀಲನಗೌಡ ಪಾಟೀಲ್, ಬಸವರಾಜ್ ಮೇಟಿ, ಬಸವರಾಜ ಹೊಗೆಸೊಪ್ಪಿನ್, ನಿಂಗಪ್ಪ ಹೊನ್ನಾಪೂರ, ವೀರುಪಾಕ್ಷಿ ಹಿತ್ತಲಮನಿ, ಹನಮಂತ ಪೂಜಾರ, ಲಖನಸಿಂಗ್ ಗಂಗಾವತಿ, ಆಶು ಜೂಲಗುಡ್ಡ, ಮಹದೇವಿ ದೊಡ್ಡಗೌಡ್ರ, ನಾಗಪ್ಪ ಅಣ್ಣಿಗೇರಿ, ಪ್ರಕಾಶ್ ಸಂದೀಗವಾಡ, ಅಜೀಂ ಖಾಜಿ, ನಿಂಗರೆಡ್ಡಿ ಬಸವರೆಡ್ಡೇರ, ಯಲ್ಲಪ್ಪ ಭೋವಿ ಸೇರಿದಂತೆ ಇತರರು ಇದ್ದರು.