ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಜೊತೆ ಕೈ ಜೋಡಿಸಿರುವ ಗುಮಾನಿ ಇದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನಮ್ಮ ಪಕ್ಷದ ಬಗ್ಗೆ ನಮಗಿಂತ ಚೆನ್ನಾಗಿ ಸಿದ್ದರಾಮಯ್ಯ ಅವರಿಗೆ ತಿಳಿಯುತ್ತಿದೆ. ಅವರು ನಮ್ಮ ನಾಯಕರ ಸಂಪರ್ಕ ಸಾಧಿಸಿರಬಹುದು. ಹೀಗಾಗಿ ನಮ್ಮ ಪಕ್ಷದ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ನ್ಲ್ಲಿ ನನಗೆ ಉಳಿಗಾಲವಿಲ್ಲವೆಂದು ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಿರಾದಲ್ಲಿ 70 ವರ್ಷಗಳಿಂದ ಬಿಜೆಪಿ ಗೆದ್ದಿರಲಿಲ್ಲ. ಸದ್ಯ ಇದಕ್ಕೆ ಅವಕಾಶ ಸಿಕ್ಕಿದೆ. ಉಪಚುನಾವಣೆ ಆಡಳಿತ ಪಕ್ಷದ ಪರವಾಗಿರುತ್ತವೆ. ಉಪಚುನಾವಣೆಯಲ್ಲಿ ಹಣ, ಅಧಿಕಾರ ದುರುಪಯೋಗವಾಗುತ್ತದೆ ಎಂದು ಆರೋಪಿಸಲಾಗುತ್ತಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಉಪಚುನಾವಣೆಯಲ್ಲಿ ಮಾಡಿದ್ದೇನು? ನಂಜನಗೂಡು, ಚಾಮರಾಜನಗರ ಉಪಚುನಾವಣೆ ಹೇಗೆ ಗೆದ್ದರು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಹಾಳಾದರೂ ಸರಿ ಡಿ.ಕೆ.ಶಿವಕುಮಾರ್ ಗೆ ಯಾವುದೇ ಸ್ಥಾನ ಸಿಗಬಾರದು. ಇದು ಸಿದ್ದರಾಮಯ್ಯ ಅವರ ಸಿದ್ಧಾಂತ ಹಾಗೂ ಉದ್ಧೇಶವಾಗಿದೆ. ಹೀಗಾಗಿ ಪ್ರತಿಯೊಂದು ಚುನಾವಣೆಯಲ್ಲಿಯೂ ಕಾಂಗ್ರೆಸ್ ಸೋಲನ್ನು ಸಿದ್ದರಾಮಯ್ಯ ಬಯಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.