ನವದೆಹಲಿ: ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ ಯೋಧ ಉಗ್ರರನ್ನು ಸೆದೆಬಡಯುವ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಜಮ್ಮು – ಕಾಶ್ಮೀರದ ಮಚಿಲಿ ಸೆಕ್ಟರ್ ನಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ತೆಲಂಗಾಣ ಮೂಲದ ರಿಯಾಡಾ ಮಹೇಶ್ ಹುತಾತ್ಮರಾಗಿದ್ದಾರೆ. ಭಾನುವಾರ ನಡೆದ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ. ಮಹೇಶ್ ಪತ್ನಿ ಸುಹಾಸಿನಿ ಹಾಗೂ ಕುಟುಂಬಸ್ಥರು ಸದ್ಯ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕ ಒಳಗಾಗಿದ್ದಾರೆ. ನಿಜಾಮಾಬಾದ್ ಜಿಲ್ಲೆಯ ಮೇಲ್ಪುರದ ಕೋಮನ್ ಪಲ್ಲಿ ಗ್ರಾಮದ ಅವರ ಮನೆಯಲ್ಲಿ ಸದ್ಯ ಕತ್ತಲು ಆವರಿಸಿದಂತಾಗಿದೆ.
ಈ ಕಾರ್ಯಾಚರಣೆಯಲ್ಲಿ ಮೂವರು ಯೋಧರು ಹಾಗೂ ಓರ್ವ ಬಿಎಸ್ ಎಫ್ ಯೋಧ ಸಾವ್ನಪ್ಪಿದ್ದಾರೆ. ಈ ಪೈಕಿ ಮಹೇಶ್ ಕೂಡ ಇದ್ದಾರೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಇರಳದ ರೆಡ್ಡಿವರಿಪಲ್ಲಿ ಮೂಲದ ಹವಾಲ್ದಾರ್ ಪ್ರವೀಣ್ ಕುಮಾರ್ ರೆಡ್ಡಿ(37), ಸೇನೆ ಅಧಿಕಾರಿ ಕ್ಯಾಪ್ಟನ್ ಅಶುತೋಷ್ ಕುಮಾರ್, ಬಿಎಸ್ ಎಫ್ ಪೇದೆ ಸುದೀಪ್ ಸರ್ಕಾರ್ ಸಹ ಈ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದಾರೆ.
26 ವರ್ಷದ ಮಹೇಶ್, ಸೇನೆ ಸೇರಬೇಕೆಂಬ ಕನಸು ಹೊತ್ತು ದೇಶ ಸೇವೆಗೆ ಅಣಿಯಾಗಿದ್ದರು. ಪೋಷಕರಾದ ರಿಯಾಡಾ ರಾಜು ಹಾಗೂ ಗಂಗಮಲ್ಲು ಇಬ್ಬರೂ ರೈತರು. ಆರ್ಮಿ ಆಫೀಸರ್ ಪುತ್ರಿ ಸುಹಾಸಿನಿ ಅವರನ್ನು ಮಹೇಶ್ ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದರು. ಮಹೇಶ್ ಓರ್ವ ಸಹೋದರನನ್ನು ಹೊಂದಿದ್ದಾರೆ. ಸಹೋದರ ಗಲ್ಫ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಮಗನನ್ನು ಕಳೆದುಕೊಂಡಿದ್ದಕ್ಕೆ ಸದ್ಯ ಕುಟುಂಬ ತೀವ್ರ ದುಃಖದಲ್ಲಿ ಮುಳುಗಿದೆ. ನ. 2ಕ್ಕೆ ಕೊನೆಯ ಕರೆ ಮಾಡಿದ್ದ ಮಗ, ಮರಳಿ ಬರಲಿಲ್ಲ ಎಂದು ನೊಂದುಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಮಹೇಶ್ ಅವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿಸಲಾಗಿತ್ತು. ಬಳಿಕ ಸಾವನ್ನಪ್ಪಿರುವ ಕುರಿತು ಸೇನೆ ತಿಳಿಸಿದೆ. ಹೀಗಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.