ನವದೆಹಲಿ: ಪ್ರತಿಯೊಬ್ಬರಿಗೂ ಕೊರೊನಾ ಸಾಕಷ್ಟು ಪಾಠಗಳನ್ನು ಕಲಿಸಿದೆ. ಇಂದು ಜಾಗತೀಕರಣದ ಜೊತೆಗೆ ಸ್ವಾವಲಂಬನೆ ಕೂಡ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ತಂತ್ರಜ್ಞಾನ ಸಂಸ್ಥೆಯ 51ನೇ ವಾರ್ಷಿಕ ಸಮ್ಮೇಳನದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆತ್ಮನಿರ್ಭರ ಅಭಿಯಾನ ಇಂದಿನ ಯುವ ಜನತೆಗೆ ಹೊಸ ಅವಕಾಶಗಳನ್ನೇ ತೆರೆದಿಡುತ್ತಿದ್ದು, ಈ ಮೂಲಕ ಪ್ರತಿಯೊಬ್ಬರೂ ಸೃಜನಶೀಲತೆಯನ್ನು ಮುಕ್ತವಾಗಿ ತೋರಿಸಬಹುದು ಎಂದು ಹೇಳಿದ್ದಾರೆ.
ಇಂದು ಭಾರತ ದೇಶದಲ್ಲಿ ಯುವಕರಿಗೆ ಸುಲಭವಾಗಿ ಉದ್ಯಮ ನಡೆಸಲು ಪೂರಕವಾಗುವಂತಹ ವಾತಾವರಣ ನಿರ್ಮಿಸಿಕೊಡಬೇಕಾಗಿದೆ. ಆ ಮೂಲಕ ತಮ್ಮ ಸಂಶೋಧನೆಗಳೊಂದಿಗೆ ಕೋಟ್ಯಾಂತರ ಭಾರತೀಯರ ಜೀವನದಲ್ಲಿ ಬದಲಾವಣೆ ತರಬಹುದು ಎಂದು ಹೇಳಿದ್ದಾರೆ.
ಕೊರೊನಾ ನಂತರ, ವಿಶ್ವದ ಚಿತ್ರಣವೇ ಬದಲಾಗಲಿದ್ದು, ತಂತ್ರಜ್ಞಾನ ಬಹಳ ದೊಡ್ಡ ಪಾತ್ರ ವಹಿಸಲಿದೆ. ನಿಮ್ಮ ನಿಮ್ಮಲ್ಲಿಯೇ ಸವಾಲುಗಳನ್ನು ಇಟ್ಟುಕೊಂಡು ಪ್ರತಿದಿನ ಹೊಸ ಹೊಸ ವಿಷಯಗಳನ್ನು ಕಲಿಯುತ್ತ ಸಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ. ವಿನಯತೆ ಅಥವಾ ನಮ್ರತೆ, ನಿಮ್ಮ ಯಶಸ್ಸು, ಸಾಧನೆ ಬಗ್ಗೆ ನಿಮಗೆ ಹೆಮ್ಮೆಯಿರಬೇಕು, ನೀವು ಮಾಡಿರುವ ಸಾಧನೆಯನ್ನು ಕೆಲವೇ ಕೆಲವರು ಮಾಡಿರುತ್ತಾರೆ. ಸಾಧನೆ ಮಾಡಿದ ನಂತರ ನಿಮ್ಮಲ್ಲಿ ವಿನಯತೆ ಮತ್ತಷ್ಟು ಹೆಚ್ಚಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.