ಹುಬ್ಬಳ್ಳಿ : ಯೋಗೀಶಗೌಡ ಅವರ ಕೊಲೆ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೊಳಪಟ್ಟಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ವಿಜಯ್ ಕುಲರ್ಣಿ, ಈ ಪ್ರಕರಣದಲ್ಲಿ ರಾಜಕೀಯ ಕೈವಾಡವಿದೆ. ಅಲ್ಲದೇ, ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.
ನಮ್ಮನ್ನು ರಾಜಕೀಯವಾಗಿ ಮುಗಿಸುವುದಕ್ಕೆ ಈ ರೀತಿ ಕುತಂತ್ರ ಮಾಡುತ್ತಿದ್ದಾರೆ. ಆದರೆ, ನಾವು ಕಾನೂನು ರೀತಿಯಲ್ಲಿಯೇ ಇದಕ್ಕೆ ಉತ್ತರ ನೀಡುತ್ತೇವೆ. ಏನೇ ಬಂದರೂ ನಾವು ಎದುರಿಸಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.
ರಾಜಕೀಯವಾಗಿ ನಮ್ಮನ್ನು ಮುಕ್ತ ಮಾಡುವುದಕ್ಕಾಗಿ ನಮ್ಮ ಮೇಲೆ ಈ ಪ್ರಕರಣ ಎತ್ತಿ ಹಾಕುವ ಪ್ರಯತ್ನ ನಡೆದಿದೆ. ಅವರು ಏನೇ ಕುತಂತ್ರ ಮಾಡಿದರೂ ನಾವು ಕಾನೂನು ರೀತಿ ಹೋರಾಟ ಮಾಡುತ್ತೇವೆ. ನಾನು ಹಾಗೂ ನನ್ನ ಸಹೋದರ ರಾಜಕೀಯವಾಗಿ ಬಲಿಷ್ಠರಾಗಿರುವ ಹಿನ್ನೆಲೆಯಲ್ಲಿ ಈ ರೀತಿ ಮಾಡುತ್ತಿದ್ದಾರೆ. ಲಿಂಗಾಯತ ಮುಖಂಡರನ್ನು ಬೆಳೆಸ ಬಾರದು ಎಂಬ ಕಾರಣಕ್ಕಾಗಿಯೇ ಇಂತಹ ಕುತಂತ್ರ ನಡೆದಿದೆ. ವಿನಯ್ ಕುಲಕರ್ಣಿ ಏನು ಎಂಬುವುದು ಜಿಲ್ಲೆಯ ಜನತೆಗೆ ಗೊತ್ತು ಎಂದು ಹೇಳಿದ್ದಾರೆ.
ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ವಿನಯ ಕುಲಕರ್ಣಿ ಅವರು ನಮ್ಮ ಕ್ಷೇತ್ರದವರು. ಅವರು ಅಂತಹ ತಪ್ಪು ಮಾಡಿಲ್ಲ ಎಂದು ಸ್ವತಃ ಹೇಳಿದ್ದಾರೆ. ಅವರನ್ನು ಬಂಧನ ಮಾಡಿದ್ದಾರೆ. ಬೇಕಾದರೆ ಮಾಡಲಿ. ಆದರೆ, ಅದರ ಸತ್ಯಾಸತ್ಯತೆ ತಿಳಿಯಲಿ. ಕಾನೂನು ಎಲ್ಲರಿಗೂ ಒಂದೇ. ಇದರಲ್ಲಿ ರಾಜಕೀಯ ಮಾಡಬಾರದು. ಸಿಬಿಐ ,ಇಡಿ ಸಣ್ಣ -ಪುಟ್ಟ ಪಕ್ಷದವರ ಮೇಲೆ ಕಾನೂನು ಕೈಗೆ ತೆಗೆದುಕೊಂಡು ಕಿರುಕುಳ ನೀಡುತ್ತಿದೆ. ಇಂತಹ ಸಂಸ್ಥೆಗಳನ್ನು ತಮ್ಮ ಅಧಿಕಾರದ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳಬಾರದು ಎಂದು ಹೇಲಿದ್ದಾರೆ.