ಶಿರಹಟ್ಟಿ: ಪ್ರಸ್ತುತ ದಿನಗಳಲ್ಲಿ ಕನ್ನಡದ ಜನತೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಮಾತೃ ಭಾಷೆಯನ್ನು ಮರೆಯುತ್ತಿದ್ದು, ಕನ್ನಡದ ಕಂಪು ಕಮರಿ ಹೋಗುತ್ತಿರುವುದು ವಿಷಾದಕರ ಸಂಗತಿ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಸ್ಥಳೀಯ ಎಸ್.ಎಂ.ಡಬಾಲಿ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತದ ವತಿಯಿಂದ 65ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸಲು ಹಲವು ಮಹಾತ್ಮರು ಸಾಕಷ್ಟು ಶ್ರಮಿಸಿದ್ದಾರೆ. ಕನ್ನಡ ಭಾಷೆಯನ್ನು ಇಡೀ ಜಗತ್ತಿಗೆ ಸಾರಲು ಕುವೆಂಪು, ದ.ರಾ. ಬೇಂದ್ರೆ, ಕುಂಬಾರ, ಪಂಪ, ರನ್ನ, ವಿ.ಕೃ. ಗೋಕಾಕ ಅವರಂತಹ ಹಲವಾರು ಕವಿಗಳು ಕನ್ನಡದ ಕಂಪನ್ನು ವಿಶ್ವ ಮಟ್ಟದಲ್ಲಿ ಬೆಳಸಿದ್ದಾರೆ. ಇಂತಹ ಸಂಪದ್ಬರಿತ ಕನ್ನಡ ಭಾಷೆಯನ್ನು ಇಂದು ನಾªÉಲ್ಲರೂ ಮರೆಯದೆ ಉಳಿಸಿ ಬೆಳಸಬೇಕು ಎಂದು ಹೇಳಿದರು.
ನಂತರ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ, ಕನ್ನಡ ಭಾಷೆಯು ನಮ್ಮ ಸಂಸ್ಕೃತಿ, ಇತಿಹಾಸ ನೆಲ ಜಲದ ಸಂಪತ್ತು ಸೇರಿದಂತೆ ಎಲ್ಲವನ್ನು ಬಿಂಬಿಸುವ ಸಾಹಿತ್ಯವಾಗಿದೆ. ಆದ್ದರಿಂದ ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವವಲ್ಲ. ಕನ್ನಡ ಭಾಷೆಯದನ್ನಾಡುವ ಮನುಷ್ಯನ ಆಳವಾದ ಭಾವನೆ ಹಾಗೂ ಪರಸ್ಪರ ಸಂಬಂಧಗಳು ಒಡಗೂಡಿರುತ್ತವೇ. ತನ್ನ ತನದ ಪ್ರಜ್ಞೆ ಇರುತ್ತದೆ. ಕರುನಾಡು ಕಂದಗಳ ಕರುಳು ಬಳ್ಳಿಯನ್ನು ಒಂದುಗೂಡಿಸುವ ಐತಿಹಾಸಿಕ ದಿನ. ಇಂತಹ ದಿನವನ್ನು ಪ್ರತಿಯೊಬ್ಬ ಕನ್ನಡಿಗರು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಪ್ರತಿನಿತ್ಯ ಆಚರಿಸಬೇಕು. ಅಂದಾಗ ಮಾತ್ರ ಕನ್ನಡ ಭಾಷೆ ಉತ್ತುಂಗದಲ್ಲಿ ಮೆರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಓಲೇಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ಸಿಪಿಐ ವಿಕಾಸ ಲಮಾಣಿ, ಸಮಾಜ ಕಲ್ಯಾಧಿಕಾರಿ ಎಸ್.ಬಿ.ಹರ್ತಿ, ಶ್ರೀಧರ, ನರೇಂದ್ರ ಡಿ.ಬಿ, ಎಂ.ಕೆ.ಲಮಾಣಿ, ಬಸವರಾಜ ವಡವಿ, ದೇವೇಂದ್ರ ಶಿಂಧೆ, ಎಂ.ಎ.ಮಕಾಂದರ ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರು, ಶಾಲಾ ಶಿಕ್ಷಕರು ಹಾಗೂ ಪಟ್ಟಣದ ಮುಖಂಡರು ಉಪಸ್ಥಿತರಿದ್ದರು.