ಗಜೇಂದ್ರಗಡ: ದೇಶದ ವಿದ್ಯಾವಂತ ಯುವ ಸಮೂಹವನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಮೂಲಕ ಬೀದಿಗೆ ತಂದು ನಿಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದುರಾಡಳಿತದಿಂದ ಪದವೀಧರರು ಸಂಕಷ್ಟದ ದಿನಗಳನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಡಿಪ್ಲೋಮಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಪಶ್ಚಿಮ ಪದವೀಧರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ. ಕುಬೇರಪ್ಪ ಪರ ಮತಯಾಚಿಸಿ ಅವರು ಮಾತನಾಡಿ, ಸುಳ್ಳಿನ ಸರಮಾಲೆ ಕಟ್ಟುವ ಮೂಲಕ ಬಣ್ಣ, ಬಣ್ಣದ ಮಾತುಗಳಿಂದ ದೇಶದ ಜನರನ್ನು ಮರಳು ಮಾಡುತ್ತಿರುವ ಬಿಜೆಪಿ ಪಕ್ಷದ ಯಾವೊಂದು ಆಶ್ವಾಸನೆಗಳು ಇಡೇರಿಲ್ಲ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೊಡ್ಡ ಮಟ್ಟದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಇದರಿಂದ ಪದವೀಧರರು ತೀವೃ ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನೊಂದೆಡೆ ಸರ್ಕಾರಿ ಕಚೇರಿಗಳನ್ನು ಖಾಸಗೀಕರಣ ಮಾಡುವ ಮೂಲಕ ಅಲ್ಲಿನ ಉದ್ಯೋಗಿಗಳ ಬದುಕಿಗೆ ಕಂಟಕವನ್ನುಂಟು ಮಾಡುತ್ತಿದ್ದಾರೆ. ದೇಶದ ಜನರ ಅಭ್ಯೂದಯಕ್ಕಾಗಿ ಆಡಳಿತ ನಡೆಸದೇ, ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಪದವೀಧರರು ಕರ್ನಾಟಕದಿಂದಲೇ ಬಿಜೆಪಿ ಪಕ್ಷಕ್ಕೆ ಸೋಲಿನ ಸಂದೇಶವನ್ನು ದೇಶಕ್ಕೆ ರವಾನಿಸಬೇಕಿದೆ ಎಂದು ಕರೆ ನೀಡಿದರು.
ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ ಮಾತನಾಡಿ, ಬಿಜೆಪಿಯ ಸುಳ್ಳು ಆಶ್ವಾಸನೆಗೆ ಪದವೀಧರ ಮತದಾರರು ಮಣೆ ಹಾಕಬಾರದು, ರಾಜ್ಯದ ಬಿಜೆಪಿ ಸ್ಥಿತಿ ನೋಡಿದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಯಾವ ಸಂದರ್ಭದಲ್ಲಾದರೂ ಚುನಾವಣೆ ಬರಬಹುದು. ಪದವೀಧರರ ದುಸ್ಥಿತಿಗೆ ಕಾರಣವಾದ ಬಿಜೆಪಿ ಅಭ್ಯರ್ಥಿಗೆ ಸೋಲುಣಿಸುವ ಮೂಲಕ ಕಾಂಗ್ರೆಸ್ನ ಕುಬೇರಪ್ಪ ಅವರಿಗೆ ಮತ ನೀಡಲು ಮುಂದಾಗಿ ಎಂದು ಮನವಿ ಮಾಡಿದರು.
ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೋರ್ಪಡೆ, ವೀರಣ್ಣ ಸೊನ್ನದ, ಪ್ರಾಚಾರ್ಯ ಎಸ್.ಟಿ. ಭೈರಪ್ಪನವರ, ಶಶಿಧರ ಹೂಗಾರ, ಬಸವರಾಜ ಬಂಕದ, ಶ್ರೀಧರ ಬಿದರಳ್ಳಿ, ಹಸನ ತಟಗಾರ, ಶರಣಪ್ಪ ಚಳಗೇರಿ, ಮುರ್ತುಜಾ ಡಾಲಾಯತ್, ಚಂಬಣ್ಣ ಚವಡಿ, ಯಲ್ಲಪ್ಪ ಬಂಕದ, ರಾಜು ಸಾಂಗ್ಲಿಕಾರ, ಪ್ರಶಾಂತ್ ರಾಠೋಡ, ಎಚ್.ಎಸ್. ಸೋಂಪೂರ, ಎಂ.ವಾಯ್. ಮುಧೋಳ, ಅಪ್ಪು ಮತ್ತುಕಟ್ಟಿ, ಅವಿನಾಶ ಮತ್ತಿಕಟ್ಟಿ, ಬಿ.ಎಸ್.ಶೀಲವಂತರ ಸೇರಿ ಇತರರು ಇದ್ದರು.