ಖಾಂಡ್ವಾ : ಭಾಷಣ ಕೇಳಲು ಬಂದ ರೈತರೊಬ್ಬರು ಹೃದಯಾಘಾತದಿಂದ ಕಣ್ಣೆದುರೇ ಸಾವನ್ನಪ್ಪಿದ್ದರೂ ಬಿಜೆಪಿ ನಾಯಕರು ಭಾಷಣ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ನ. 30ರಂದು ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಪ್ರಚಾರ ಸಭೆ ನಡೆದಿತ್ತು.
ಈ ಸಭೆಯಲ್ಲಿ ಬಿಜೆಪಿಯ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಭಾಷಣ ಮಾಡಬೇಕಿತ್ತು. ಈ ಸಂದರ್ಭದಲ್ಲಿಯೇ ಪ್ರಮಾದವೊಂದು ಜರುಗಿ, ರೈತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದರು. ಇದು ತಿಳಿದರೂ ನಾಯಕರು ಮಾತ್ರ ಭಾಷಣ ಮಾಡಿದ್ದಾರೆ.
ಬಿಜೆಪಿಯ ಪಂಧಾನ ಕ್ಷೇತ್ರದ ಶಾಸಕ ರಾಮ್ ಡಾಂಗೊರೆ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ 80 ವರ್ಷದ ರೈತ ಜೀವನ್ ಸಿಂಗ್ ಎಂಬುವವರು ಅಲ್ಲಿಯೇ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗುತ್ತಿತ್ತು.
ರೈತ, ಕುಸಿದು ಬೀಳುತ್ತಿದ್ದಂತೆ ಅಕ್ಕ ಪಕ್ಕ ಕುಳಿತಿದ್ದವರೆಲ್ಲರೂ ಗಾಬರಿಯಾಗಿ ಓಡಿದ್ದಾರೆ. ಅಲ್ಲಿನ ಎಲ್ಲ ಕುರ್ಚಿಗಳೂ ಖಾಲಿಯಾದವು. ವ್ಯಕ್ತಿಯೊಬ್ಬರು ಮೃತ ರೈತನ ಮುಖದ ಮೇಲೆ ಟವೆಲ್ ಹೊದಿಸಿದ್ದಾರೆ. ಆದರೆ, ರೈತ ಮೃತಪಟ್ಟಿರುವುದು ತಿಳಿದ ನಂತರವೂ ನಾಯಕರು ಭಾಷಣ ಮುಂದುವರೆಸಿದ್ದರು.
ಸಿಂಧಿಯಾ ಅವರು ವೇದಿಕೆ ಬರುವುದಕ್ಕೂ ಮುನ್ನ ಈ ಘಟನೆ ಜರುಗಿತ್ತು. ಆನಂತರ ಅವರಿಗೆ ವಿಷಯ ತಲುಪಿಸಲಾಯಿತು. ನಂತರ ಸಿಂಧಿಯಾ, ಒಂದು ನಿಮಿಷದ ಮೌನ ಆಚರಿಸಿ, ಭಾಷಣ ಪ್ರಾರಂಭಿಸಿದರು.