ಮಸ್ಕಿ: ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋದ ಚನ್ನಬಸನ ಪತ್ತೆಗೆ ಹಿನ್ನಡೆಯಾಗಿರುವ ತಾಲೂಕ ಆಡಳಿತ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ಪ್ರಗತಿಪರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.
ಪಟ್ಟಣದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಾಲೂಕ ಆಡಳಿತ ವಿರುದ್ಧ ಅಕ್ರೋಶ ಹೊರ ಹಾಕಿದರು.
ಈ ವೇಳೆ ರೈತ ಸಂಘದ ಮುಖಂಡ ವಿಜಯಕುಮಾರ ಬಡಿಗೇರ ಮಾತನಾಡಿ, ಹಳ್ಳದ ಪ್ರವಾಹಕ್ಕೆ ಸಿಲುಕಿದ ಚನ್ನಬಸವನ ರಕ್ಷಣೆ ಮಾಡುವಲ್ಲಿ ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ಹಳ್ಳದ ಪ್ರವಾಹಕ್ಕೆ ಸಿಲುಕಿದ ಚನ್ನಬಸನ ರಕ್ಷಣೆ ವೇಳೆ ಪೂರ್ವತಯಾರಿ ಮಾಡದೇ ಏಕಾಏಕಿ ಹಗ್ಗದ ಮೂಲಕ ಹಳ್ಳಕ್ಕೆ ಇಳಿದಿದ್ದು ಅಪಾಯಕ್ಕೆ ಕಾರಣವಾಗಿದೆ. ಜಲೀಲ್ ಅವರನ್ನು ಕ್ರೇನ್ ಮೂಲಕ ರಕ್ಷಣೆ ಮಾಡಿದ ರೀತಿಯಲ್ಲಿ ಚನ್ನಬಸನ ರಕ್ಷಣೆ ಮಾಡಿದರೆ ಒಂದು ಜೀವ ಉಳಿಯುತಿತ್ತು. ಚನ್ನಬಸವ ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದ, ಅವನಿಗೆ ನಂಬಿ ಜೀವನ ಕಟ್ಟಿಕೊಂಡಿದ್ದ ಅವರ ಕುಟುಂಬ ಬೀದಿಗೆ ಬಂದಂತೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಸರಕಾರ ಇತ್ತ ಗಮನ ಹರಿಸಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ನಿರ್ಲಕ್ಷ್ಯ ಮಾಡಿದ ತಾಲೂಕ ತಹಶೀಲ್ದಾರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಶೋಕ ಮುರಾರಿ, ದುರ್ಗರಾಜ ವಟಗಲ್ಲ, ಅನೀಲಕುಮಾರ, ದೇವರಾಜ ಮಡಿವಾಳ, ಸಿದ್ದು ಮುರಾರಿ ಸೇರಿದಂತೆ ಇತರರು ಇದ್ದರು.